ನವದೆಹಲಿ :ಬೆಂಗಳೂರಿನಲ್ಲಿ ಸಭೆ ನಡೆಸುತ್ತಿರುವ ವಿರೋಧ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಭ್ರಷ್ಟರ ಸಭೆ ಎಂಬುದು ಜನರಿಗೆ ಗೊತ್ತಾಗುತ್ತಿದೆ ಮತ್ತು ತಮ್ಮ ಭ್ರಷ್ಟಾಚಾರ ಬಯಲಿಗೆ ಬಂದಾಗ ಈ ಪಕ್ಷಗಳು ಪರಸ್ಪರ ರಕ್ಷಣೆಗೆ ಮುಂದಾಗುತ್ತವೆ ಎಂದಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್ನಲ್ಲಿರುವ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ನಂತರ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಮಾತ್’ ಮತ್ತು ‘ಕುಂಬಾ’ ನಂಥ ಪದಗಳನ್ನು ಬಳಸಿ ವಿರೋಧ ಪಕ್ಷಗಳನ್ನು ಗೇಲಿ ಮಾಡಿದ ಪ್ರಧಾನಿ, ಜನ ಅಂಥವರಿಂದ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ‘‘ಇದು ಕಡು ಭ್ರಷ್ಟರ ಸಮ್ಮೇಳನವೆಂದು ಜನರೇ ಹೇಳುತ್ತಿದ್ದಾರೆ. ಈ ಸಭೆಯ ಇನ್ನೊಂದು ವಿಶೇಷತೆ ಎಂದರೆ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಜಾಮೀನಿನ ಮೇಲೆ ಯಾರಾದರೂ ಹೊರಗಿದ್ದರೆ ಅವರನ್ನು ಇವರೆಲ್ಲ ಬಹಳ ಗೌರವದಿಂದ ಕಾಣುತ್ತಾರೆ. ಇಡೀ ಕುಟುಂಬದವೇ ಜಾಮೀನಿನ ಮೇಲೆ ಹೊರಗಿದ್ದರೆ ಅಂಥವರಿಗೆ ಗೌರವ ಇನ್ನೂ ಜಾಸ್ತಿ. ಯಾರಾದರೂ ಒಂದು ಸಮುದಾಯವನ್ನು ಅವಮಾನಿಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದರೆ ಅಂಥವರನ್ನೇ ಇವರು ಗೌರವಿಸುತ್ತಾರೆ” ಎಂದು ಪ್ರಧಾನಿ ಟೀಕಾ ಪ್ರಹಾರ ನಡೆಸಿದರು.ಬಾಲಿವುಡ್ ಹಾಡನ್ನು ಉಲ್ಲೇಖಿಸಿದ ಮೋದಿ, ಜನ ಹಲವಾರು ಮುಖವಾಡ ಧರಿಸುತ್ತಾರೆ ಎಂದರು. “ಈ ಜನ ಎಷ್ಟು ಮುಖವಾಡಗಳನ್ನು ಹಾಕಿದ್ದಾರೆ ಎಂಬುದನ್ನು ನೀವು ನೋಡಬಹುದು. ಈ ಜನರೆಲ್ಲ ಒಟ್ಟಾದಾಗ ಜನರ ಮನಸ್ಸಿನಲ್ಲಿ ಬರುವುದು ಇವರು ಮಾಡಿದ ಸಾವಿರಾರು ಕೋಟಿಗಳ ಭ್ರಷ್ಟಾಚಾರದ ಆಲೋಚನೆ. ಕಡು ಭ್ರಷ್ಟರ ಸಭೆ ಇಲ್ಲಿ ನಡೆಯುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’’ ಎಂದು ಅವರು ಜರಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news





