ಪಾಟ್ನಾ(ಬಿಹಾರ) : “ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಲ್ಲಿದ್ದಾರೆ. ಸೋತ ಬಳಿಕ ಅವರು ವಿದೇಶದಲ್ಲಿ ಹೋಗಿ ನೆಲೆಯೂರಲು ಯೋಚನೆ ಮಾಡುತ್ತಿದ್ದಾರೆ” ಎಂದು ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಭಾನುವಾರ ಟೀಕಿಸಿದರು.ಕೆಲವು ದಿನಗಳ ಹಿಂದೆ ಮೋದಿ ಮಾಡಿದ್ದ ‘ಕ್ವಿಟ್ ಇಂಡಿಯಾ’ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಭಾರತ ತೊರೆಯಲು ಯೋಜಿಸುತ್ತಿರುವುದು ಪ್ರಧಾನಿ ಮೋದಿ. ಇದೇ ಕಾರಣಕ್ಕಾಗಿಯೇ ಅವರು ಪದೇ ಪದೇ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ತಾವು ಎಲ್ಲಿ ಆರಾಮವಾಗಿ ಕಾಲೂರಬಹುದು, ತಮ್ಮ ಇಷ್ಟದ ಪಿಜ್ಜಾ, ಮೊಮೋಸ್ ಹಾಗೂ ಚೌ ಮೇನ್ ಅನ್ನು ಎಲ್ಲಿ ಆನಂದವಾಗಿ ಸವಿಯಬಹುದು ಎಂಬುದಕ್ಕೆ ಸೂಕ್ತವಾದ ಸ್ಥಳ ಹುಡುಕುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಮೈತ್ರಿ ವಿಪಕ್ಷಗಳು ಸೇರಿ ತಮ್ಮ ಮಹಾಮೈತ್ರಿ ಒಕ್ಕೂಟಕ್ಕೆ ‘ಇಂಡಿಯಾ’ ಎಂದು ಹೊಸ ನಾಮಕರಣ ಮಾಡಿದ್ದರ ಹಾಗೂ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ಹೊಸ ಒಕ್ಕೂಟ ‘ಇಂಡಿಯಾ’ವನ್ನು ರಚಿಸಿರುವ ವಿರೋಧ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ರಾಜಕೀಯ ಮಾಡುತ್ತಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಈಸ್ಟ್ ಇಂಡಿಯಾ ಕಂಪನಿಯನ್ನು ವಿದೇಶಿಗರು ಸ್ಥಾಪಿಸಿದ ಸಂಸ್ಥೆಗಳು ಎಂದು ಹೋಲಿಕೆ ಮಾಡಿ ಹೇಳಿದ್ದರು. ಕೆಲವು ನಿಷೇಧಿತ ಸಂಸ್ಥೆಗಳಿಗೆ ‘ಇಂಡಿಯಾ’ ಎಂದು ದೇಶದ ಹೆಸರನ್ನು ಬಳಸುವುದನ್ನು ಒಂದು ಫ್ಯಾಶನ್ ಆಗಿದೆ ಎಂದಿದ್ದರು.
ಕಿಡ್ನಿ ಟ್ರಾನ್ಸ್ಪ್ಲೆಂಟ್ ಚಿಕಿತ್ಸೆಯ ನಂತರ ವಿರಳವಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಲಾಲೂ ಪ್ರಸಾದ್ ಯಾದವ್, ತಮ್ಮ ಪುತ್ರ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿ, ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ ‘ಇಂಡಿಯಾ’ ವಿಪಕ್ಷಗಳ ಮಹಾಮೈತ್ರಿ ಒಕ್ಕೂಟದ ಸಭೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಸಭೆಯಲ್ಲಿ ತಮ್ಮ ಪ್ರಮುಖ ಪ್ರತಿಸ್ಪರ್ಧಿ, ಈಗ ಮೈತ್ರಿ ಪಕ್ಷವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆಗೆ ಲಾಲೂ ಪ್ರಸಾದ್ ಯಾದವ್ ಭಾಗವಹಿಸಲಿದ್ದಾರೆ.
“ನಾವು ಈ ಒಗ್ಗಟ್ಟನ್ನು ಹೀಗೆಯೇ ಉಳಿಸಿಕೊಳ್ಳಬೇಕು. ಬಿಜೆಪಿಯನ್ನು ಸೋಲಿಸಬೇಕು. ನರೇಂದ್ರ ಮೋದಿ ಅವರು ಸಂವಿಧಾನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಅವರ ಆ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ” ಎಂದು ಲಾಲೂ ಹೇಳಿದರು. ಇದರ ಜೊತೆಗೆ ಪ್ರಸ್ತುತ ಭಾರಿ ಚರ್ಚೆಯಲ್ಲಿರುವ ಮಣಿಪುರದಲ್ಲಿ ನಡೆಯುತ್ತಿರುವ ಕಲಹಕ್ಕೆ ಕೇಂದ್ರವೇ ಕಾರಣ ಎಂದು ಆರೋಪಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





