ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ, ದೀಪಾವಳಿ ಹಬ್ಬ ಬಂದರೆ ಸಾಕು ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ ಈ ವರ್ಷದ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ ಆವರಿಸಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ ಖುಷಿಪಡುತ್ತಿದ್ದ ಗ್ರಾಮದ ಮೂರು ಜೀವಗಳು ಪಟಾಕಿ ದುರಂತದಲ್ಲಿ ಬಲಿಯಾಗಿವೆ.
ಕಾಟೇನಹಳ್ಳಿ ಗ್ರಾಮದ ಸ್ನೇಹಿತರಾಗಿದ್ದ ಶಿವಾನಂದ ಅಕ್ಕಿ(22), ದ್ಯಾಮಪ್ಪ ಓಲೇಕಾರ್ (25) ಹಾಗೂ ರಮೇಶ ಬಾರ್ಕಿ(26) ಪಟಾಕಿಯಲ್ಲಿ ದುರಂತದಲ್ಲಿ ಸಾವಿಗೀಡಾದವರು. ಆ.29 ರಂದು ಆಲದಕಟ್ಟೆಯ ಗ್ರಾಮದ ಹೊರವಲಯದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಂಭವಿಸಿದ ಅವಘಡದಲ್ಲಿ ಸ್ನೇಹಿತರು ಸಾವಿಗೀಡಾಗಿದ್ದಾರೆ.
ಗ್ರಾಮದಲ್ಲಿ ಯಾವುದೇ ಧಾರ್ಮಿಕ ಆಚರಣೆ ಇರಲೇ, ಸಂಸ್ಕೃತಿ ಕಾರ್ಯಕ್ರಮಗಳಿರಲೇ ಈ ಮೂವರು ಸ್ನೇಹಿತರು ಹಾಜರಿರುತ್ತಿದ್ದರು. ಆದರೆ ಪಟಾಕಿ ದುರಂತದ ರೂಪದಲ್ಲಿ ಬಂದ ಜವರಾಯ ಜೀವಗಳನ್ನು ಬಲಿಪಡೆದಿದ್ದಾನೆ. ಸ್ನೇಹಿತರನ್ನು ಕಳೆದುಕೊಂಡ ಕಾಟೇನಹಳ್ಳಿ ಗ್ರಾಮ ಸಹಜ ಸ್ಥಿತಿಗೆ ಮರಳಲಾರಂಭಿಸಿದೆ. ಆದರೆ ಸಾವನ್ನಪ್ಪಿದ ಮೂವರ ಮನೆಗಳಲ್ಲಿ ಕತ್ತಲು ಆವರಿಸಿದೆ. ಮನೆಗೆ ಬೆಳಕಾಗಬೇಕಾಗಿದ್ದ ಮಕ್ಕಳನ್ನು ಕಳೆದುಕೊಂಡ ಪೋಷಕರ ಒಡಲಲ್ಲಿ ಬೇಸರ ಮಡುಗಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





