Bangalore ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಖೈದಿಯಂತೇ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆ ಎಚ್ ಡಿ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದಾಗ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಚ, ಹಾಸಿಗೆ ಎಂದು ಸವಲತ್ತು ನೀಡಲಾಗಿತ್ತು.ಆದರೆ ಪ್ರಜ್ವಲ್ ರೇವಣ್ಣಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಸಾಮಾನ್ಯ ಖೈದಿಯಂತೇ ನಡೆಸಿಕೊಳ್ಳಲಾಗುತ್ತಿದೆ.

ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ಏಕಾಂಗಿಯಾಗಿದ್ದಾರೆ. ಅವರು ಬಯಸಿದರೆ ಮಾತ್ರ ದಿನದಲ್ಲಿ 30 ನಿಮಿಷ ಲಾನ್ ನಲ್ಲಿ ಓಡಾಡಲು ಅವಕಾಶ ನೀಡಲಾಗುತ್ತದೆ. ಆದರೆ ಅವರು ತಮ್ಮ ಕೊಠಡಿಯಲ್ಲೇ ಮೌನಕ್ಕೆ ಶರಣಾಗಿ ಕುಳಿತಿರುತ್ತಾರೆ ಎಂದು ತಿಳಿದುಬಂದಿದೆ. ಅವರ ರಕ್ಷಣೆಗೆ ಕೊಠಡಿಯ ಸಮೀಪದಲ್ಲಿ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಕಳೆದ ಎರಡು ದಿನಗಳಿಂದ ಪ್ರಜ್ವಲ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರಿಗೂ ಇತರೆ ಖೈದಿಗಳಂತೆ ಸಹ ಖೈದಿಗಳೇ ತಯಾರಿಸಿದ ಆಹಾರವನ್ನು ತಳ್ಳುಗಾಡಿಯಲ್ಲಿ ತಂದು ಜೈಲು ಕೋಣೆಯ ಬಳಿ ತಂದು ಕೊಡಲಾಗಿದೆ. ಮಧ್ಯಾಹ್ನದ ಊಟಕ್ಕೆ ಎಲ್ಲರಿಗೂ ನೀಡುವಂತೆ ಮುದ್ದೆ, ಅನ್ನ, ಸಾರು ನೀಡಲಾಗಿದೆ. ಇದರ ಹೊರತಾಗಿ ಅವರು ಯಾರ ಜೊತೆಯೂ ಮಾತನಾಡುವ ಪ್ರಯತ್ನ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

