ಪೊಲೀಸ್ ಇಲಾಖೆ ಸಿಬ್ಬಂದಿಯನ್ನು (ಪೊಲೀಸ್ ಕಾನ್ಸ್ಟೆಬಲ್) ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಕೋರಿಕೆ ಆಧಾರದ ಮೇಲೆ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ ಅಂತರ ಜಿಲ್ಲಾ/ಘಟಕಗಳ ವರ್ಗಾವಣೆಗೆ ಇಲಾಖೆಯಿಂದ ರೂಪಿಸಿಲಾಗಿರುವ ಅಧಿಕೃತ ಆನ್ಲೈನ್ ಪೋರ್ಟಲ್ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರವೇ ಪರಿಗಣಿಸಬೇಕು. ಪ್ರತಿ ಘಟಕದಿಂದ ವರ್ಗಾವಣೆ ಆಗಿ ಹೋಗುವ ಸಿಬ್ಬಂದಿ ಸಂಖ್ಯೆ ಶೇ 15ಕ್ಕಿಂತ ಹೆಚ್ಚಿರಬಾರದು. ಸೇವಾ ಜ್ಯೇಷ್ಠತೆ ಆಧಾರದ ಮೇಲೆಯೇ ವರ್ಗಾವಣೆ ನಡೆಸಬೇಕು. ಎಲ್ಲ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರಾಕ್ಷೇಪಣಾ ಪತ್ರ ಕಡ್ಡಾಯ ಆಗಿರುತ್ತದೆ ಎಂದು ಆದೇಶ ಹೇಳಿದೆ.ಇಲಾಖೆ ವಿಚಾರಣೆ ಅಥವಾ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅಂತಹ ಸಿಬ್ಬಂದಿಯ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಹಾಗೂ ಘಟಕದಲ್ಲಿ ಕನಿಷ್ಠ ಏಳು ವರ್ಷಗಳಿಂದ ಇದ್ದರೆ (ಮುಂಬಡ್ತಿ ಹುದ್ದೆಯಲ್ಲಿರುವ ಸಿಬ್ಬಂದಿ ಸೇರಿದಂತೆ) ಮಾತ್ರ ವರ್ಗಾವಣೆಗೆ ಅರ್ಹರಾಗಿರುತ್ತಾರೆ (ಮಾಜಿ ಸೈನಿಕ ಪ್ರಕರಣದಲ್ಲಿ ಕನಿಷ್ಠ ಮೂರು ವರ್ಷ).ಅಂತರ ಜಿಲ್ಲೆ/ಘಟಕಗಳ ವರ್ಗಾವಣೆಯನ್ನು ಕೋರಿಕೆ ಮೇಲೆ ಮಾಡುವುದರಿಂದ ಜ್ಯೇಷ್ಠತೆಯನ್ನು ಬಿಟ್ಟುಕೊಡುವ ಷರತ್ತಿಗೆ ಒಳಪಟ್ಟು ಮಾಡಲಾಗುವುದು. ಅಂತಹ ನೌಕರರ ಜ್ಯೇಷ್ಠತೆಯನ್ನು ವರ್ಗಾವಣೆಗೊಂಡ ಘಟಕದಲ್ಲಿನ ಕೇಡರ್ನ ಕೊನೆಯವರಾಗಿ ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚಿನ ಅರ್ಜಿಯನ್ನು ಸಲ್ಲಿಸಿದ್ದರೆ ಮೊದಲ ಅಧಿಕೃತ ಅರ್ಜಿಯನ್ನು ಮಾತ್ರವೇ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ. ಮಾಹಿತಿಗೆ ಸೂಚನೆಎಲ್ಲ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್ ಹಾಗೂ ಸಹಾಯಕ ಸಬ್ಇನ್ಸ್ಪೆಕ್ಟರ್ ಅವರ ಕನಿಷ್ಠ ಮತ್ತು ಗರಿಷ್ಠ ಅವಧಿ ನಿಗದಿಪಡಿಸಿ ವರ್ಗಾವಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಆದರೂ ಹಲವು ಘಟಕಗಳಲ್ಲಿ ಸಿಬ್ಬಂದಿಯು ಒಂದೇ ಸ್ಥಳ/ಠಾಣೆಯಲ್ಲಿ 5 ವರ್ಷಗಳಿಗೂ ಮೇಲ್ಪಟ್ಟು ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ವರ್ಗಾವಣೆ ನಂತರ ಅದೇ ಠಾಣೆಗಳಿಗೆ ಒಒಡಿ ಆಧಾರದ ಮೇಲೆ ಸ್ಥಳ ನಿಯುಕ್ತಿಗೊಳಿಸುತ್ತಿರುವುದು ಗೊತ್ತಾಗಿದ್ದು, ಯಾವುದೇ ಕಾರಣಕ್ಕೂ ಮತ್ತೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ಇಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಜುಲೈ 7ರಂದು ನಡೆದ ಸಭೆಯಲ್ಲೂ ಸೂಚನೆ ನೀಡಿದ್ದಾರೆ. ಏಳು ದಿನಗಳ ಒಳಗೆ ಕೈಗೊಂಡ ಕ್ರಮದ ಮಾಹಿತಿಯನ್ನು ನೀಡುವಂತೆ ಎಲ್ಲ ಘಟಕದ ಅಧಿಕಾರಿಗಳಿಗೆ ಅವರು ಪತ್ರ ಬರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

