ಬೆಂಗಳೂರು: ಐವತ್ತು ವರ್ಷ ಮೀರಿದ ರಾಜ್ಯದ ಎಲ್ಲ ಜಲಾಶಯಗಳ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಇದಕ್ಕೆ ಅಂದಾಜು 9ರಿಂದ 10 ಸಾವಿರ ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆ ಇದೆ. ಈ ಸಂಬಂಧ ಅನುದಾನ ಕೋರಿ ಕೇಂದ್ರ ಸರಕಾರಕ್ಕೆ ವಿಸ್ತೃತ ಮನವಿ ಸಲ್ಲಿಸಲು ಜಲಸಂಪನ್ಮೂಲ ಇಲಾಖೆ ನಿರ್ಧರಿಸಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳ ನಿಯೋಗ ಕೇಂದ್ರ ಜಲಶಕ್ತಿ ಸಚಿವರ ಭೇಟಿಗೆ ನಿರ್ಧರಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಮುಕ್ತಾಯಗೊಂಡ ಬಳಿಕ ಕೇಂದ್ರ ಸಚಿವರ ಭೇಟಿಗೆ ಸಮಯ ಕೋರಲು ತೀರ್ಮಾನಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ತುಂಗಭದ್ರಾ ಜಲಾಶಯದ ಗೇಟ್ ಮುರಿದು ನೀರು ನಷ್ಟವಾದ ಬಳಿಕ ಜಲಾಶಯ ದುರಸ್ತಿಗೆ ಚಿಂತಿಸಲಾಗಿತ್ತು.
ಕೆಲವು ತಿಂಗಳುಗಳ ಹಿಂದೆ ಹಿಂದೆ ತುಂಗಾಭದ್ರ ಜಲಾಶಯದ 9ನೇ ಗೇಟ್ ಕೊಚ್ಚಿಕೊಂಡು ಹೋಗಿ ಉಂಟಾದ ಅಪಾರ ಜಲನಷ್ಟದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಲಾಶಯಗಳ ಸ್ಥಿತಿಗತಿ ಹೇಗಿದೆ ಎಂಬುದನ್ನು ಅಧ್ಯಯನ ಮಾಡುವುದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ಈಗ ವರದಿ ನೀಡಿದೆ. ಕೆಆರ್ಎಸ್ ಹೊರತುಪಡಿಸಿ 50 ವರ್ಷ ಮೇಲ್ಪಟ್ಟ ಎಲ್ಲ ಜಲಾಶಯಗಳ ದುರಸ್ತಿ ನಡೆಸಬೇಕೆಂದು ಅಭಿಪ್ರಾಯ ನೀಡಲಾಗಿದೆ.
ದುರಸ್ತಿ ಕಾರ್ಯದ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ ಕೇಂದ್ರ ಸರಕಾರದ ಡ್ರಿಪ್ ಯೋಜನೆ ಅನ್ವಯ ಹಣಕಾಸು ನೆರವು ಕೋರುವುದಕ್ಕೆ ನಿರ್ಧರಿಸಲಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಬಾಕಿ ಉಳಿದಿರುವ ನೀರಾವರಿ ಹಾಗೂ ಕೃಷಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಹಣಕಾಸು ನೆರವು ಕೊಡುವಂತೆ ಭೇಟಿಯ ಸಂದರ್ಭದಲ್ಲಿ ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

