Breaking News

ಅಂದಾಜು 42 ಸಾವಿರ ಕೋಟಿ ರೂ. ಸಾಲದ ಸುಳಿಗೆ ಸಿಲುಕಿದ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು

ಬೆಂಗಳೂರು: ಸಾಲ ಮಾಡಿಯಾದರೂ ತುಪ್ಪ ತಿನ್ನಲು ರಾಜ್ಯದ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಪಣತೊಟ್ಟಂತಿವೆ. ಅದರ ಫ‌ಲವಾಗಿ ಅಂದಾಜು 42 ಸಾವಿರ ಕೋಟಿ ರೂ. ಸಾಲದ ಸುಳಿಗೆ ಸಿಲುಕಿದ್ದು, ಆ ಹೊರೆಯನ್ನು ಪರೋಕ್ಷವಾಗಿ ದರ ಪರಿಷ್ಕರಣೆ ಮತ್ತಿತರ ರೂಪದಲ್ಲಿ ಗ್ರಾಹಕರು ಹೊರುವಂತಾಗಿದೆ.
ಸ್ವತಃ ಇಂಧನ ಸಚಿವರು ಈಚೆಗೆ ವಿಧಾನಸಭೆಯಲ್ಲಿ ಇಲಾಖೆಯ ಹಣಕಾಸಿನ ಸ್ಥಿತಿಗತಿ ಕುರಿತು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಅದರಂತೆ ಎಸ್ಕಾಂಗಳು ಸರಿಸುಮಾರು 42 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿವೆ. ಈ ಪೈಕಿ ಬೆಸ್ಕಾಂ 18,095 ಕೋಟಿಯೊಂದಿಗೆ ಸಿಂಹಪಾಲು ಹೊಂದಿದೆ. ಇದರ ಅನಂತರದ ಸ್ಥಾನದಲ್ಲಿ ಹೆಸ್ಕಾಂ ಇದ್ದು, ಅದರ ಸಾಲದ ಮೊತ್ತ 10,332 ಕೋಟಿ ರೂ. ಆಗಿದೆ. ಇದರಿಂದ ಹೊರಬರಲು ಅಲ್ಲಲ್ಲಿ ತನ್ನ ಆಸ್ತಿಗಳನ್ನೇ ಅಡ ಇಡುತ್ತಿರುವುದು ಕಂಡು ಬರುತ್ತಿದೆ.
11 ಕೆವಿ ಓವರ್‌ಹೆಡ್‌ ಮಾರ್ಗಗಳನ್ನು ನೆಲದಡಿ ತೆಗೆದುಕೊಂಡು ಹೋಗುವುದು, ಹೊಸ ಸಾಫ್ಟ್ವೇರ್‌ಗಳ ಅಳವಡಿಕೆ ಮತ್ತು ಮೇಲ್ದರ್ಜೆಗೇರಿಸುವುದು ಸೇರಿ ಮತ್ತಿತರ ನೆಪದಲ್ಲಿ ಎಸ್ಕಾಂಗಳು ಆಗಾಗ್ಗೆ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿಕೊಂಡು ಬಂದಿವೆ. ಇದರ ಪರಿಣಾಮ ಸಾಲ ಬೆಟ್ಟದಂತಾಗಿದೆ. ವಿಚಿತ್ರವೆಂದರೆ, ಗೃಹಜ್ಯೋತಿಯಡಿ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ಗೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಸರಕಾರ ಭರಿಸುತ್ತಿದ್ದು, ಯಾವುದೇ ಬಾಕಿ ಉಳಿಸಿಕೊಂಡಿಲ್ಲ.
ರಾಜ್ಯದ ಶೇ.90ರಷ್ಟು ಗೃಹ ಬಳಕೆದಾರರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದಾರೆ. ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ತಗಲುವ ವೆಚ್ಚವನ್ನೂ ಸರಕಾರವೇ ನಿಯಮಿತವಾಗಿ ಕೊಡುತ್ತಿದೆ. ಇದರ ಹೊರತಾಗಿಯೂ ಸಾಲದ ಜತೆಗೆ ವಿದ್ಯುತ್‌ ಖರೀದಿಗೆ ಪ್ರತಿಯಾಗಿ ಪಾವತಿಸಬೇಕಾದ ಸಾವಿರಾರು ಕೋಟಿ ಮೊತ್ತವನ್ನು ಎಸ್ಕಾಂಗಳು ಬಾಕಿ ಉಳಿಸಿಕೊಂಡಿವೆ.
ಪ್ರತಿ ವರ್ಷ ವಿದ್ಯುತ್‌ ದರ ಪರಿಷ್ಕರಣೆ ಆಗುತ್ತಿದ್ದು, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಒಂದೂವರೆ ದಶಕದಿಂದ ಹೆಚ್ಚಳ ಮಾಡುತ್ತ ಬಂದಿದೆ. ಮತ್ತೂಂದೆಡೆ ಇತ್ತೀಚಿನ ವರ್ಷಗಳಲ್ಲಿ ಪ್ರತಿ ತಿಂಗಳು ಇಂಧನ ಖರೀದಿ ಹೊಂದಾಣಿಕೆ ಶುಲ್ಕದ ಹೆಸರಿನಲ್ಲಿ ಆಯಾ ತಿಂಗಳು ಪರಿಷ್ಕರಣೆ ಮಾಡಲಾಗುತ್ತದೆ. ಇನ್ನು ಕೈಗಾರಿಕೆಗಳಿಗೆ ನೀಡಲಾಗುವ ವಿದ್ಯುತ್‌ ಸಹಜವಾಗಿ ಎಸ್ಕಾಂಗಳಿಗೆ ಲಾಭ ತಂದುಕೊಡುತ್ತಿದೆ. ಇದರ ಹೊರತಾಗಿಯೂ ಸಾಲದ ಸುಳಿಯಿಂದ ಎಸ್ಕಾಂಗಳು ಹೊರಬಾರದಿರುವುದು ತಜ್ಞರ ಹುಬ್ಬೇರಿಸುವಂತೆ ಮಾಡಿದೆ.
2024ರ ಮಾರ್ಚ್‌ ಅಂತ್ಯಕ್ಕೆ ವಿವಿಧ ವಿದ್ಯುತ್‌ ಉತ್ಪಾದನ ಕಂಪೆನಿಗಳಿಂದ ವಿದ್ಯುತ್‌ ಖರೀದಿ ಮಾಡಿ ಬಾಕಿ ಉಳಿಸಿಕೊಂಡಿರುವ ಕಂಪೆನಿಗಳ ಪೈಕಿ ಬೆಸ್ಕಾಂ 8,360 ಕೋಟಿ ರೂ. ಬಾಕಿ ಉಳಿಸಿಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದೆ. ಹೆಸ್ಕಾಂ 5,434.89 ಕೋಟಿ ರೂ., ಜೆಸ್ಕಾಂ 3,121.16 ಕೋಟಿ ರೂ., ಸೆಸ್ಕ್ 2,634.30 ಕೋಟಿ ರೂ. ಮತ್ತು ಮೆಸ್ಕಾಂ 1,414 ಕೋಟಿ ರೂ. ವಿದ್ಯುತ್‌ ಖರೀದಿ ಬಾಕಿ ಉಳಿಸಿಕೊಂಡಿವೆ ಎಂದು ಸ್ವತಃ ಇಂಧನ ಸಚಿವ ಕೆ.ಜೆ. ಜಾರ್ಜ್‌ ಈಚೆಗೆ ಸದನಕ್ಕೆ ಸಲ್ಲಿಸಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *