ಬೆಂಗಳೂರು :ಜಲಾನಯನ ಅಭಿವೃದ್ಧಿ ಯೋಜನೆಗಳಲ್ಲಿ ಕರ್ನಾಟಕ ರಾಜ್ಯ ತೋರಿರುವ ಅಭೂತ ಪೂರ್ವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲೇ 8 ಹೊಸ ಯೋಜನೆಗಳಿಗೆ ಹೆಚ್ಚುವರಿ ರೂ.99 ಕೋಟಿಗಳು ಬಿಡುಗಡೆಗೆ ಮಂಜೂರಾತಿ ನೀಡಿದೆ.
ರಾಜ್ಯ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿಅವರಿಗೆ ಈ ಬಗ್ಗೆ ಲಿಖಿತ ಪತ್ರ ಬರೆದಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ, ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ ಸಿಂಗ್ ಚೌವ್ಹಾಣ್, ಜಲಾನಯನ ಯೋಜನೆ 2.0 ಅಡಿಯಲ್ಲಿ ಹೊಸದಾಗಿ 39,413 ಹೆಕ್ಟೇರ್ನಲ್ಲಿ ಜಲಾನಯನ ಅಭಿವೃದ್ಧಿಗಾಗಿ ಮಂಜೂರಾಗಿ ನೀಡಿರುವುದಾಗಿ ತಿಳಿಸಿದ್ದಾರೆ.
ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುವ ಭೂ ಸಂಪನ್ಮೂಲ ಸಚಿವಾಲಯದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು 2021-22 ರಿಂದ 2025-26ರವರೆಗೆ ಇದನ್ನು ಜಾರಿಗೊಳಿಸಲಾಗಿದೆ.
ದೇಶದಾದ್ಯಂತ ಈ ಯೋಜನೆಯಡಿ ಮಳೆಯಾಶ್ರಿತ ಭೂಮಿಯಲ್ಲಿ 50.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿಗಾಗಿ 1150 ಯೋಜನೆಗಳ ಅನುಷ್ಠಾನಕ್ಕೆ ರೂ.12303.33 ಕೋಟಿಗಳನ್ನು ಈಗಾಗಲೇ ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕ ರಾಜ್ಯದ 2.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 63 ಜಲಾನಯನ ಅಭಿವೃದ್ಧಿ ಯೋಜನೆಗಳಿಗೆ ರೂ.679.61 ಕೋಟಿಗಳ ಮಂಜೂರಾತಿ ನೀಡಲಾಗಿದ್ದು ಇದರಲ್ಲಿ ಕೇಂದ್ರದ ಪಾಲಿನ ರೂ.348.79 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗ ಮತ್ತೆ ಹೆಚ್ಚುವರಿ ಭೂ ಪ್ರದೇಶಕ್ಕೆ ರೂ.99 ಕೋಟಿಗಳ ಅನುದಾನದ ಮಂಜೂರಾತಿ ನೀಡಿರುವುದಾಗಿ ಸಚಿವರಾದ ಶಿವರಾಜ ಸಿಂಗ್ ಚೌಹಾಣ್ ರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಈ ಯೋಜನೆಗಳ ಯಶಸ್ವಿ ಹಾಗೂ ಕಾಲಮಿತಿಯೊಳಗಿನ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರವು ಅಗತ್ಯವೆಂದು ತಿಳಿಸಿದ್ದಾರೆ.
ಫೆ 28 ರೊಳಗೆ 100% ಗುರಿ ಸಾಧನೆಗೆ ಸಚಿವರ ಸೂಚನೆ
ಕೃಷಿ ಹಾಗೂ ಜಲಾಯನ ಇಲಾಖೆಗಳಲ್ಲಿ ಫೆ28 ರೊಳಗೆ ಶೇ 100 ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆಗೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ಕೊಠಡಿ ಸಂ.123 ರಲ್ಲಿ ರಾಜ್ಯದಲ್ಲಿ ಜಲಾನಯನ ಯೋಜನೆಗಳ ಅನುಷ್ಠಾನ ಕುರಿತು ಜಂಟಿ ಕೃಷಿ ನಿರ್ದೇಶಕರೊಂದಿಗೆ ವಿಡಿಯೊ ಸಂವಾದ ನಡೆಸಿ ಪ್ರಗತಿ ಪರಿಶೀಲಿಸಿದ ಸಚಿವರು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಇಲಾಖೆ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದರು.
ಜಲಾನಯನ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮುಂಚೂಣಿಯಲ್ಲಿದ್ದು ಕಳೆದ ಸಾಲಿನಲ್ಲಿ ಶೇಕಡ 124 ರಷ್ಟು ಅನುದಾನ ಸದ್ಭಳಕೆ ಮಾಡಲಾಗಿತ್ತು. ಈ ಬಾರಿಯೂ ಅದೇ ರೀತಿಯ ಸಾಧನೆ ನಿರೀಕ್ಷಿಸಲಾಗಿದೆ. ಫೆಬ್ರವರಿ ಅಂತ್ಯದವೊಳಗೆ ಸಂಪೂರ್ಣ ಹಣ ನಿಯಮಾನುಸಾರ ವೆಚ್ಚ ಮಾಡಿದ್ದಲ್ಲಿ ಕೆಂದ್ರದಿಂದ ಹೆಚ್ಚುವರಿ ಮಂಜೂರಾತಿ ದೊರೆಯಲಿದೆ ಎಂದು ಕೃಷಿ ಸಚಿವರು ತಿಳಿಸಿದರು.
ಅಧಿಕಾರಿಗಳು ಯಾವುದೇ ಅನುದಾನ ವ್ಯರ್ಥ ವಾಗದಂತೆ ನಿಗಾ ವಹಿಸಬೇಕು ಮತ್ತು ಕಾಲಮಿತಿಯೊಳಗೆ ಯೋಜನೆಗಳ ಸಂಪರ್ಣ ಅನುಷ್ಠಾನ ಮಾಡಬೇಕು. ಇದರಿಂದ ರಾಜ್ಯಕ್ಕೆ ಹೆಚ್ಚುವರಿ ಹಣ ಲಭ್ಯವಾಗುವ ಸಾದ್ಯತೆ ಗಳಿದ್ದು ಅಧಿಕ ರೈತರಿಗೆ ಅನುಕೂಲವಾಗಲಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಇದಲ್ಲದೇ ಕೃಷಿ ಹಾಗೂ ಜಲಾನಯನ ಇಲಾಖೆಗಳ ಇತರೆ ಯೋಜನೆಗಳೂ ಸಹ ಸಮರ್ಪಕವಾಗಿ ಸಂಪೂರ್ಣವಾಗಿ, ಗುಣಮಟ್ಟದೊಂದಿಗೆ ಅನುಷ್ಠಾನವಾಗಬೇಕು. ಇಲಾಖೆಯ ಅಧಿಕಾರಿಗಳು ಈವರೆಗೆ ಉತ್ತಮವಾಗಿ ಕಾರ್ಯನಿರ್ವಹಿತ್ತಾ ಬಂದಿದ್ದು ಮುಂದೆಯೂ ಅದನ್ನು ನಿರೀಕ್ಷಿಸಲಾಗಿದೆ ಎಂದರು.
ಕೃಷಿ ಇಲಾಖೆ ಕಾರ್ಯದರ್ಶಿ ಡಾ||ರವಿಶಂಕರ್, ಆಯುಕ್ತರಾದ ವೈ.ಎಸ್.ಪಾಟೀಲ್, ನಿರ್ದೇಶಕರಾದ ಡಾ||ಪುತ್ರ, ಜಲಾನಯನ ನಿರ್ದೇಶಕರಾದ ಬಂಥನಾಳ್ ಮತ್ತಿತರರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

