ಗುಡಿಬಂಡೆ: ತಾಲೂಕಿನ ತಿರುಮಣಿ ಗ್ರಾಮ ಪಂಚಾಯತ್ ಪಿ.ಡಿ.ಓ. ಶ್ರೀನಿವಾಸ ಮೂರ್ತಿ ಎಂಬವರು ಕಾಮಗಾರಿಗಳ ಬಾಬ್ತು ಬಿಲ್ ಮಾಡಲು ಗುತ್ತಿಗೆದಾರರಿಂದ ಸುಮಾರು 3 ಲಕ್ಷ 50 ಸಾವಿರ ಹಣ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಿ.ಡಿ.ಓ. ಅಮಾನತಿಗಾಗಿ ಆಗ್ರಹಿಸಲಾಗುತ್ತಿದೆ.ಗುಡಿಬಂಡೆ ತಾಲೂಕು ಪಂಚಾಯತ್ ನ ತಿರುಮಣಿ ಮತ್ತು ಹಂಪಸಂದ್ರ ಗ್ರಾಮ ಪಂಚಾಯತ್ ನಲ್ಲಿ ಅಭಿವೃದ್ದಿ ಅಧಿಕಾರಿಯಾಗಿ ಕಾರ್ಯ ನಿರ್ವಹಿತ್ತಿರುವ ಶ್ರೀನಿವಾಸ ಮೂರ್ತಿ ಅವರು ಗ್ರಾಮ ಪಂಚಾಯತ್ ಕಾಮಗಾರಿಗಳನ್ನು ಮಾಡಿಸಿ ಬಿಲ್ ಮಾಡಿಸುವ ಸಲುವಾಗಿ ಗುತ್ತಿಗೆದಾರರಿಂದ ಸುಮಾರು 3,50,000 ರೂ.ಗಳನ್ನು ಲಂಚವಾಗಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿ.ಡಿ.ಓ. ಶ್ರೀನಿವಾಸಮೂರ್ತಿ ಅವರ ಖಾಸಗಿ ಕಚೇರಿಯಲ್ಲಿ ಲಂಚ ಪಡೆದುಕೊಂಡಿದ್ದು, ಆ ವೇಳೆ ಕಾಮಗಾರಿಗಳ ಕಡತಗಳು ಮಂಚದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಗುತ್ತಿಗೆದಾರರು ಹಾಗೂ ಪಿ.ಡಿ.ಓ. ಇದು ಎಷ್ಟು, ಇನ್ನು ಎಷ್ಟು ಕಾಮಗಾರಿಗಳ ಹಣ ಕೊಡಬೇಕು ಎಂಬ ಮಾತುಗಳು ಕೂಡಾ ವೀಡಿಯೋದಲ್ಲಿ ಕೇಳಿ ಬಂದಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಪಿ.ಡಿ.ಓ. ಶ್ರೀನಿವಾಸಮೂರ್ತಿ ಕಚೇರಿಯಲ್ಲೂ ಲಭ್ಯವಾಗದೆ, ದೂರವಾಣಿಗೂ ಸಹ ಸಿಗುತ್ತಿಲ್ಲ ಎನ್ನಲಾಗಿದೆ. ವೀಡಿಯೋ ನೋಡಿದ ಸಾರ್ವಜನಿಕರು ತಕ್ಷಣ ಪಿ.ಡಿ.ಓ. ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

