ಜ್ಯೋತಿಷಿಯೊಬ್ಬ ಪೂಜೆ ಹಾಗೂ ದೀಕ್ಷೆಯ ನೆಪದಲ್ಲಿ ಬ್ಯೂಟಿಷನ್ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಡಿ ಇಲ್ಲಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ. ಕುಂಬಳಗೋಡು ನಿವಾಸಿ ಮೋಹನಕುಮಾರ್(35) ಎಂಬ ಜ್ಯೋತಿಷಿ ವಿರುದ್ಧ ರಾಜಾಜಿನಗರದಲ್ಲಿ ಬ್ಯೂಟಿಷನ್ ಟ್ರೈನಿಂಗ್ ಸೆಂಟರ್ ನಡೆಸುತ್ತಿದ್ದ ಮಹಿಳೆ ಅತ್ಯಾಚಾರ ಆರೋಪ ಮಾಡಿದ್ದು, ಪೊಲೀಸರು ಆರೋಪಿಯ ಪತ್ತೆ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜ್ಯೋತಿಷಿಯಾದ ಮೋಹನ್ ತನ್ನ ತಂಗಿಯನ್ನು ಬ್ಯೂಟಿಷಿಯನ್ ಟ್ರೈನಿಂಗ್ ಸೆಂಟರ್ಗೆ ಸೇರಿಸಲು ಬಂದಾಗ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಸಲುಗೆ ಬೆಳೆಸಿಕೊಂಡು ಆರ್ಥಿಕ ವೃದ್ಧಿಗೆ ಪೂಜೆ ಮಾಡಿಸಬೇಕೆಂದು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. 2025ರ ಜೂ.30ರಂದು ರಾಮನಗರದ ಪಿರಮಿಡ್ ವ್ಯಾಲಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ. ನಂತರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆಗೆಂದು ಕರದೊಯ್ದು ವಾಪಸ್ಸಾಗುವಾಗ ಕಾರಿನಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 2026ರ ಫೆ.10ರಂದು ದೀಕ್ಷೆ ನೀಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದಿದ್ದ ಆರೋಪಿಯು, ಪತಿ ಮತ್ತು ಮಗನನ್ನು ಹೊರಗೆ ಕಳುಹಿಸಿ, ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದ್ದಲ್ಲಿ, ನಿನ್ನ ಪತಿ ಮತ್ತು ಮಗನ ಮೇಲೆ ವಾಮಾಚಾರ ಮಾಡಿಸಿ, ರಕ್ತ ಕಕ್ಕಿ ಸಾಯುವಂತೆ ಮಾಡುವುದಾಗಿ ಮಹಿಳೆಯನ್ನು ಬೆದರಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

