ಬೆಂಗಳೂರು: ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಅಸ್ಲಂ ಪಾಷಾ ಎಂಬಾತನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇನಹಳ್ಳಿಯ ಅಸ್ಲಂ ಪಾಷಾ ಹೆಬ್ಬಾಳದ ಬಳಿಯ ಸಿಐಎಲ್ ಲೇಔಟ್ ನಿವಾಸಿ ಜಯಶ್ರೀ ಎಂಬುವರ ಮನೆಗೆ ನುಗ್ಗಿ ಕೃತ್ಯ ಎಸಗಿದ್ದ.ಆರೋಪಿಯಿಂದ 6.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಸ್ಲಂ ಪಾಷಾ, ಜಯಶ್ರೀ ಅವರ ಮನೆ ಬಳಿ ಹೋಗಿ ಕಾಲಿಂಗ್ ಬೆಲ್ ಒತ್ತಿದ್ದಾನೆ. ಮನೆಯಲ್ಲಿ ಒಬ್ಬಂಟಿಯಾಗಿದ್ದ ಜಯಶ್ರೀ, ಸಂಬಂಧಿಕರು ಬಂದಿರಬಹುದೆಂದು ಭಾವಿಸಿ ಬಾಗಿಲು ತೆಗೆದಿದ್ದರು. ನಂತರ ಏಕಾಏಕಿ ಒಳ ನುಗ್ಗಿದ್ದ ಅಸ್ಲಂ ಪಾಷಾ, ಒಳಗಿನಿಂದ ಬಾಗಿಲು ಬಂದ್ ಮಾಡಿ ಜಯಶ್ರೀ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿ ಚಿನ್ನದ ಮಾಂಗಲ್ಯ ಸರ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಜಯಶ್ರೀ ಅವರ ಮನೆಯ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಯಿತು. ಅಪರಾಧ ಹಿನ್ನೆಲೆಯುಳ್ಳ ಅಸ್ಲಂ ಪಾಷಾ, ಈ ಹಿಂದೆ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಬಂಧನದಿಂದ ದರೋಡೆ ಹಾಗೂ ಕನ್ನಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

