ಚನ್ನಗಿರಿ (ದಾವಣಗೆರೆ): ಬೀಡಿ ಸೇದಿ ಹುಲ್ಲಿನ ಮೇಲೆ ಎಸೆದು ಮಲಗಿದ್ದ ವೃದ್ಧರೊಬ್ಬರು ಅದೇ ಬೀಡಿಯಿಂದ ಹೊತ್ತಿದ ಬೆಂಕಿಯಲ್ಲಿ ಸಜೀವ ದಹನವಾದ ಘಟನೆ ಕಳೆದ ಭಾನುವಾರ ತಡರಾತ್ರಿ ಚನ್ನಗಿರಿ ತಾಲೂಕಿನ ಶೃಂಗಾರಬಾಗು ತಾಂಡಾದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಾಂಡಾದ ರೇಖ್ಯಾ ನಾಯ್ಕ್ (61) ರಾತ್ರಿ ಊಟ ಮುಗಿಸಿಕೊಂಡು ದನದ ಕೊಟ್ಟಿಗೆಯಲ್ಲಿ ಮಲಗಿದ್ದರು. ಮಲಗುವ ಮುನ್ನ ಬೀಡಿ ಸೇದಿ ಅದನ್ನು ಹುಲ್ಲು ತೆಂಗಿನ ಗರಿಗಳಿದ್ದ ಕೊಟ್ಟಿಗೆ ಬಳಿಯೇ ಎಸೆದು ನಿದ್ರೆಗೆ ಜಾರಿದ್ದರು. ಆದರೆ ಬೀಡಿಯ ಬೆಂಕಿ ಕಿಡಿ ತೆಂಗಿನ ಗರಿ ಮತ್ತು ಬಿದಿರಿನಿಂದ ಮಾಡಿದ್ದ ಕೊಟ್ಟಿಗೆಗೆ ಹೊತ್ತಿಕೊಂಡು ರೇಖ್ಯಾನಾಯ್ಕ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕೊಟ್ಟಿಗೆಯಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದನ್ನು ಗಮನಿಸಿದ ರೇಖ್ಯಾ ನಾಯ್ಕ ಪುತ್ರ ವಸಂತ ನಾಯ್ಕ, ಗ್ರಾಮಸ್ಥರನ್ನು ಕೂಗಿ ಕರೆದಿದ್ದಾರೆ. ಗ್ರಾಮಸ್ಥರು ಧಾವಿಸಿ ಬಂದು ನೀರು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ರೇಖ್ಯಾ ನಾಯ್ಕ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

