ಕಲಬುರಗಿ: ಸಂಸದ ಉಮೇಶ್ ಜಾಧವ್ ಅವರು ಪಿಡಿಓರನ್ನು ಹೆದರಿಸಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘ 40% ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ವಸೂಲಿ 40% ಅನ್ನೂ ದಾಟಿ ಹೋಗಿದೆ. ಗ್ರಾಪಂ ಸದಸ್ಯರು ಉದ್ಯೋಗ ಖಾತ್ರಿಯಲ್ಲಿ ಆಗದ ಕೆಲಸಕ್ಕೆ ಸಂಸದರ ಮುಖಾಂತರ ಬಿಲ್ ಮಾಡಿಸಿಕೊಂಡಿದ್ದಾರೆ. ಬಿಲ್ ಹಾಕಿಸಿಕೊಳ್ಳುವುದಕ್ಕಾಗಿ ಚಿತ್ತಾಪುರ ತಾಲೂಕಿನ ಬಿಳಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆ ಹಾಕಿರುವ ವೀಡಿಯೋ ಇದೆ. ಆದರೆ ಅದು ನನ್ನ ಕ್ಷೇತ್ರದ್ದು ಎನ್ನುವ ಕಾರಣಕ್ಕೆ ವೀಡಿಯೋವನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.

ಸಂಸದ ಉಮೇಶ್ ಜಾಧವ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಿಯಾಂಕ್ ಖರ್ಗೆ ಹಿಂದೆ ದೊಡ್ಡ ಬ್ಯಾನರ್ ಇದೆ. ಮಲ್ಲಿಕಾರ್ಜುನ್ ಖರ್ಗೆಯವರ ಮಗ ಎನ್ನುತ್ತಾರೆ. ಖರ್ಗೆಯವರ ಮನೆಯಲ್ಲಿ ಹುಟ್ಟಬೇಕು ಎಂದು ನಾನು ಅರ್ಜಿ ಹಾಕಿದ್ದೇನಾ ಎಂದು ಪ್ರಶ್ನಿಸಿದ ಅವರು, ಹಾಗಾದರೆ ಅವಿನಾಶ್ ಜಾಧವ್ ಅವರು ಉಮೇಶ್ ಜಾಧವ್ ಮನೆಯಲ್ಲಿ ಅರ್ಜಿ ಹಾಕಿ ಹುಟ್ಟಿದ್ದಾರೆ ಎಂದಾಯ್ತು. ಅವಿನಾಶ್ ಜಾಧವ್ ಕೂಡ ಜಾಧವ್ ಬ್ಯಾನರ್ನಲ್ಲೆ ಬಂದಿದ್ದಾರೆ ಎಂದು ಟೀಕಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





