Breaking News

ಚನ್ನಣ್ಣನವರ್​ ವಿರುದ್ಧ ಅಕ್ರಮ ಭೂಕಬಳಿಕೆ ಆರೋಪ : ಪ್ರೆಸ್​ನೋಟ್​ ನಲ್ಲಿ ಮೌನ ಮುರಿದ ಕರ್ನಾಟಕದ ಸಿಂಗಂ

ಬೆಂಗಳೂರು: ಕರ್ನಾಟಕದ ಸಿಂಗಂ ಎಂದೆ ಖ್ಯಾತಿ ಆಗಿರುವ ಐಪಿಎಸ್​ ಅಧಿಕಾರಿ ರವಿ ಡಿ.ಚನ್ನಣ್ಣನವರ್​ ವಿರುದ್ಧ ಅಕ್ರಮ ಭೂಕಬಳಿಕೆ ಆರೋಪ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

ಯೂತ್​ ಐಕಾನ್​ ಆಗಿ ಗುರುತಿಸಿಕೊಂಡ ರವಿ ವಿರುದ್ಧ ಭ್ರಷ್ಟಾಚಾರದ ಆರೋಪ ಜನಸಾಮಾನ್ಯರಲ್ಲೂ ಸಾಕಷ್ಟು ಪ್ರಶ್ನೆಗಳನ್ನ ಹುಟ್ಟುಹಾಕಿತ್ತು. ಕೊನೆಗೂ ಮೌನ ಮುರಿದ ರವಿ, ಪ್ರೆಸ್​ನೋಟ್​ನಲ್ಲಿ ಮಹತ್ವದ ವಿಚಾರ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ‘ಕೆಲ ವ್ಯಕ್ತಿಗಳು ನನ್ನ ಹಾಗೂ ನನ್ನ ಕುಟುಂಬದ ಮೇಲೆ ದುರುದ್ದೇಶದಿಂದ ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾವುದೇ ಭೂಮಿ ಖರೀದಿ ಮಾಡಿದ್ದರೂ ಅವುಗಳೆಲ್ಲವೂ ಕಾನೂನು ಬದ್ಧವಾಗಿಯೇ ಖರೀದಿ ಮಾಡಿದ್ದು, ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿ. ಸಾಮಾಜಿಕ ಜಾಲತಾಣದಲ್ಲಿ ನನ್ನ ತಂದೆ-ತಾಯಿ ಅವರ ಹೆಸರಿನಲ್ಲಿರುವ ಭೂಮಿಯ ಕೆಲ ಪಹಣಿ ಹಾಕಿ ಆರೋಪಿಸಿದ್ದಾರೆ. ಆ ಭೂಮಿಯನ್ನು ಕಾನೂನಾತ್ಮಕವಾಗಿಯೇ ಖರೀದಿಸಲಾಗಿದೆ. ಅದರ ಬಗ್ಗೆ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇವುಗಳನ್ನು ನಾನು ಭ್ರಷ್ಟ ರೀತಿಯಿಂದ ಸಂಪಾದಿಸಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ನನ್ನ ತೇಜೋವಧೆ ಮಾಡಲೆಂದೇ ಯತ್ನಿಸುತ್ತಿದ್ದಾರೆ. ನಾನೋಬ್ಬ ಐಪಿಎಸ್​ ಅಧಿಕಾರಿಯಾಗಿದ್ದು, ನನ್ನ ವಿರುದ್ಧದ ಆರೋಪಕ್ಕೆ ಕಾನೂನಾತ್ಮಕವಾಗಿಯೇ ಉತ್ತರಿಸುತ್ತೇನೆ’ ಎಂದಿದ್ದಾರೆ.

‘ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದವರ ವಿರುದ್ಧ 3 ಕೋಟಿ ರೂಪಾಯಿಗೆ ಮಾನನಷ್ಟ ಮೊಕದ್ದಮೆ ದಾಖಲಿಸುವೆ. ಈಗಾಗಲೇ ನಮ್ಮ ನ್ಯಾಯವಾದಿಗಳ ಮೂಲಕ ಲೀಗಲ್​ ನೋಟಿಸ್​ ಕಳುಹಿಸಿದ್ದು, ಸಂಬಂಧಪಟ್ಟವರಿಂದ ಇನ್ನೂ ಉತ್ತರ ಬಂದಿಲ್ಲ. ಸುಳ್ಳು ಆಪಾದನೆ ಮಾಡಿದ್ದಕ್ಕೆ ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಕೋರ್ಟ್​ನಲ್ಲಿ ಕ್ರಿಮಿನಲ್​  ಕೇಸ್​ ದಾಖಲಿಸಿವೆ’ ಎಂದಿರುವ ರವಿ ಚನ್ನಣ್ಣನವರ್​, ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ನಲ್ಲಿ ತಡೆಯಾಜ್ಞೆ ತಂದಿದ್ದು ಏಕೆ? ಎಂಬುದನ್ನೂ ವಿವರಿಸಿದ್ದಾರೆ.

‘ಮಾಧ್ಯಮಗಳು ಪ್ರಚಾರ ಮಾಡದಂತೆ ತಡೆಯಾಜ್ಞೆ ತಂದದ್ದು ಅವುಗಳ ಅಭಿವ್ಯಕ್ತಿ ಸತ್ವವನ್ನ ಕುಗ್ಗಿಸಲು ಅಲ್ಲ. ಅನೇಕ ಸಂಕಷ್ಟಗಳ ನಡುವೆ ಬೆಳೆದ ನಾನು ನನ್ನ ಸ್ವಾಭಿಮಾನ ಮತ್ತು ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಕೆಲವು ಸುಳ್ಳು ಸುದ್ದಿಗಳು ನನ್ನ ಬಗ್ಗೆ ಹರಿದಾಡಿದ ಕಾರಣ ನಾನು ತಡೆಯಾಜ್ಞೆ ತಂದದ್ದು. ಇದಕ್ಕೆ ಅನ್ಯತಾ ಭಾವಿಸಬಾರದು ಎಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ’ ಎಂದು ರವಿ ತಿಳಿಸಿದ್ದಾರೆ.

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *