ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ 21 ವರ್ಷಗಳ ಬಳಿಕ ಗ್ರಾಮದೇವತೆಗಳ ಜಾತ್ರೆ ನಡೆಯುತ್ತಿದ್ದು, ಶನಿವಾರ ಹೊನ್ನಾಟ ಆರಂಭವಾಗಿದೆ. ಗ್ರಾಮ ದೇವತೆ ದೇವಸ್ಥಾನದಿಂದ ದ್ಯಾಮವ್ವ ಹಾಗೂ ದುರ್ಗಾದೇವಿಯ ಮೂರ್ತಿಗಳನ್ನು ಹೊತ್ತು ಯಲ್ಲಮ್ಮನ ದೇವಸ್ಥಾನಕ್ಕೆ ಹೊನ್ನಾಟಕ್ಕೆಂದು ಕರೆ ತರಲಾಯಿತು.
ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಭಂಡಾರ ಎರಚಾಡಿ ಸಂಭ್ರಮಿಸಿದರು. ಒಂದು ರೀತಿಯಲ್ಲಿ ಇದು ಭಂಡಾರದ ಜಾತ್ರೆ ಎಂದೇ ಕರೆಯಿಸಿಕೊಳ್ಳುತ್ತದೆ.
ಹೊನ್ನಾಟದ ಮೊದಲ ದಿನವಾದ ಶನಿವಾರ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಇಬ್ಬರೂ ಗ್ರಾಮ ದೇವಿಯರ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದ್ದು, ಸುಮಾರು ನಾಲ್ಕು ಟನ್ ಭಂಡಾರವನ್ನು ಎರಚಲಾಗಿದೆ.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಗ್ಗಲಿಗೆ ಮೇಳದವರು ಪಾಲ್ಗೊಂಡಿದ್ದರು. ಇತ್ತ ಭಾವೈಕ್ಯತೆ ಸಾರುವ ದೃಷ್ಠಿಯಿಂದ ಮುಸ್ಲಿಂ ಬಾಂಧವರು ಹೊನ್ನಾಟದಲ್ಲಿದ್ದ ಹಿಂದೂ ಬಾಂಧವರಿಗೆ ಶರಬತ್ ವಿತರಣೆ ಮಾಡಿ ಭಾವೈಕ್ಯತೆ ಮೆರೆದರು.
ಉಪ್ಪಿನ ಬೆಟಗೇರಿ ಗ್ರಾಮದ ಮೊದಲ ವಾರ್ಡ್ ಇಂದು ಅಕ್ಷರಶಃ ಭಂಡಾರದಿಂದ ಮಿಂದೆದ್ದಿತ್ತು. ರೇಣುಕಾ ಯಲ್ಲಮ್ಮನ ದೇವಸ್ಥಾನದ ನಂತರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಗ್ರಾಮದೇವಿಯರ ಮೂರ್ತಿಗಳನ್ನು ಕೊಂಡೊಯ್ದು ಅಲ್ಲಿಯೂ ಹೊನ್ನಾಟ ಆಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

