ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಮೂರನೇ, ನಾಲ್ಕನೇ ರಂಗ ಬಂದರು ಸರಿಸಾಟಿಯಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅವರ ರಾಷ್ಟ್ರೀಯ ನಾಯಕತ್ವ, ಜಗತ್ತಿನ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಮೂರನೇ ರಂಗ ಆದರೂ ಮಾಡಿಕೊಳ್ಳಲಿ, ನಾಲ್ಕನೇ ರಂಗ ಆದರೂ ಮಾಡಿಕೊಳ್ಳಲಿ, ಐದನೇ ರಂಗ ಆದರೂ ಮಾಡಿಕೊಳ್ಳಲಿ ಅದು ಅವರಿಗೆ ಬಿಟ್ಟದ್ದು ಎಂದು ಪರೋಕ್ಷವಾಗಿ ಜೆಡಿಎಸ್ ವರಿಷ್ಠ ದೇವೆಗೌಡರಿಗೆ ಟಾಂಗ್ ಕೊಟ್ಟರು.
ಬೇರೆ ಬೇರೆ ಪಕ್ಷದವರು ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡಾ ಎಂದು ನಿನ್ನೆ ಜೆಡಿಎಸ್ ವರಿಷ್ಠ ದೇವೆಗೌಡರ ನೇತೃತ್ವದಲ್ಲಿ ನಡೆದ ತೃತೀಯ ರಂಗ ರಚನೆ ಕುರಿತಂತೆ ನಡೆದ ಚರ್ಚೆ ಕುರಿತು ಮಾತನಾಡಿದರು.
ಬಿಜೆಪಿ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಡಿಕೆ ಶಿವಕುಮಾರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ಕಡೆಗೆ ಅವರೇ ರಾಜಕೀಯವಾಗಿ ಆರೋಪ ಮಾಡತ್ತಾರೆ. ಮತ್ತೊಂದು ಕಡೆಗೆ ಕಾನೂನಿನ ಮೇಲೆ ಗೌರವವಿದೆ. ಕಾನೂನು ರೀತಿ ಹೋರಾಟ ಮಾಡತ್ತೇನೆ ಎನ್ನುತ್ತಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ, ಅವರದ್ದು ತಪ್ಪು ಇರಲಿಲ್ಲ ಎಂದರೆ ಕಾನೂನು ಪ್ರಕಾರ ಹೋರಾಟ ಮಾಡಲಿ ಅದು ಬಿಟ್ಟು ಎಲ್ಲದಕ್ಕೂ ರಾಜಕೀಯಕರಣ ಮಾಡೋದಕ್ಕೆ ಹೋಗಬೇಡಿ ಎಂದು ಹರಿಹಾಯ್ದರು.
ಹು-ಧಾ ಮೇಯರ್ ಉಪಮೇಯರ್ ಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಇಂದು ಸಂಜೆ ಸಭೆ ಕರೆಯಲಾಗಿದೆ. ಅಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮೇಯರ್ ಉಪಮೇಯರ್ ಆಯ್ಕೆ ಮಾಡಲಾಗುವುದು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

