ಬೆಂಗಳೂರು: ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ನಡೆದ ವಿವಾದದಿಂದ ಮನನೊಂದ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಿವ್ಯಾ ಹಾಗೂ ಮಗಳು ಮೃತ ದುರ್ದೈವಿಗಳು. ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ದಿವ್ಯಾ ಅವರ ಅತ್ತೆ- ಮಾವ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಮನೆಯಲ್ಲಿ ನಾಯಿ ಇದ್ದರೆ ಅಸ್ತಮಾ ಸಂಬಂಧಿ ಅಲರ್ಜಿ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಾಯಿಯನ್ನು ಯಾರಿಗಾದರೂ ನೀಡಿ ಎಂದು ಅತ್ತೆ ಮಾವನಿಗೆ ದಿವ್ಯಾ ಹೇಳಿದ್ದರು.
ಆದರೆ ನಾಯಿಯನ್ನು ಮನೆಯಿಂದ ಕಳಿಸಲು ಅತ್ತೆ ಮಾವ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ ಮಾವನ ನಡುವೆ ಗಲಾಟೆ ನಡೆಯುತ್ತಿತ್ತು. ಇದರಿಂದ ಮನನೊಂದು ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

