ಬೆಂಗಳೂರು : ಮುಂದಿನ 21 ದಿನಗಳ ಕಾಲ ಕರ್ನಾಟಕದ ರಾಜಕೀಯ ಮೇಲಾಟದ ಕೇಂದ್ರ ಬಿಂದುವಾಗಲಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ ‘ಭಾರತ್ ಜೋಡೋ’ ಯಾತ್ರೆ! ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಶುಕ್ರವಾರ ಕರ್ನಾಟಕ ಪ್ರವೇಶಿಸಲಿದ್ದಾರೆ.
ಶುಕ್ರವಾರದಿಂದ ಮುಂದಿನ 21 ದಿನಗಳ ಕಾಲ ಕರುನಾಡಿನಲ್ಲಿ ಬೃಹತ್ ಯಾತ್ರೆಯನ್ನು ಅವರು ಕೈಗೊಳ್ಳಲಿದ್ದಾರೆ. ಮೇಲುನೋಟಕ್ಕೆ ಈ ಯಾತ್ರೆ ದೇಶ ಒಗ್ಗೂಡಿಸುವ ಉದ್ದೇಶದ್ದು ಎಂದು ಹೇಳಲಾಗುತ್ತಿದ್ದರೂ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇರುವ ಕರ್ನಾಟಕದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ಸರ್ಕಾರದ ಅಪಸವ್ಯಗಳನ್ನು ಪರೋಕ್ಷವಾಗಿ ಜನರ ಮುಂದಿಟ್ಟು ಕಾಂಗ್ರೆಸ್ ಪರ ಅಲೆ ಎಬ್ಬಿಸುವ ಉದ್ದೇಶವನ್ನು ಹೊಂದಿದೆ.
ಈ ಸೂಚನೆ ಅರಿತಿರುವ ಬಿಜೆಪಿ ಸಹ ಯಾತ್ರೆ ಅವಧಿಯಲ್ಲೇ ಕಾಂಗ್ರೆಸ್ನ ಲೋಪದೋಷಗಳನ್ನು ದೊಡ್ಡ ಮಟ್ಟದಲ್ಲೇ ಜನರ ಮುಂದಿಡಲು ಸಿದ್ಧತೆ ನಡೆಸಿದೆ. ತನ್ಮೂಲಕ ಮುಂದಿನ 21 ದಿನಗಳ ಕಾಲ ಯಾತ್ರೆ ನೆಪದಲ್ಲಿ ದೊಡ್ಡ ರಾಜಕೀಯ ಮೇಲಾಟ ನಡೆಯುವುದು ಖಚಿತ ಎಂದೇ ನಿರೀಕ್ಷಿಸಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news

