ಮಂಡ್ಯ: ನಗರದ ಹೊರವಲಯದ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿಯಿಂದಾಗಿ ಸಂಭವಿಸಿದ ಅಫಘಾತದಲ್ಲಿ ನಿವೃತ್ತ ಯೋಧ ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾರೆ.
ಮಂಡ್ಯ ತಾಲೂಕಿನ ಸಾತನೂರು ಗ್ರಾಮದ ಬೀರೇಶ್ವರ ಬಡಾವಣೆಯ ನರಸಯ್ಯ ಅವರ ಮಗ ಕುಮಾರ್(34) ಮೃತರು.ಭಾರತೀಯ ಸೇನೆಯಲ್ಲಿ ನಿವೃತ್ತರಾದ ನಂತರ ಊರಿಗೆ ಆಗಮಿಸಿದ್ದ ಕುಮಾರ್ಗೆ ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದರು. ಪೊಲೀಸ್ ಇಲಾಖೆಗೆ ಕೆಲಸವೂ ಸಿಕ್ಕಿತ್ತು. ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ತರಬೇತಿಯನ್ನೂ ಪಡೆಯುತ್ತಿದ್ದ ಕುಮಾರ್, ರಜೆ ಮೇರೆಗೆ ಗ್ರಾಮಕ್ಕೆ ಬಂದಿದ್ದರು.
ಭಾನುವಾರ ಮಧ್ಯಾಹ್ನ ತಂದೆಯೊಂದಿಗೆ ಸಾತನೂರಿನಿಂದ ಮಂಡ್ಯಕ್ಕೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಕಾರಿಮನೆ ಗೇಟ್ ಬಳಿ ಬೈಕ್ ಸವಾರನೊಬ್ಬ ದೊಡ್ಡ ಗುಂಡಿಗೆ ಬೀಳುವುದನ್ನು ತಪ್ಪಿಸಲು ತನ್ನ ಬೈಕನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಕುಮಾರ್ ಅವರ ಬೈಕ್ ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು, ಕುಮಾರ್ ಕೆಳಕ್ಕೆ ಬಿದ್ದಿದ್ದಾರೆ.
ಈ ವೇಳೆ ತೆಂಗಿನಕಾಯಿ ಮಟ್ಟೆ ತುಂಬಿಕೊಂಡು ಮಂಡ್ಯ ಕಡೆಗೆ ಬರುತ್ತಿದ್ದ ಲಾರಿ, ಕುಮಾರ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದರು. ಕುಮಾರ್ ಅವರ ತಂದೆ ನರಸಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಚಾರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

