ಶಹಾಪುರ: ಮುಂಗಾರು ಹಂಗಾಮಿನ ಭಾಗವಾಗಿ ಇನ್ನೂ ನಾಲ್ಕು ದಿನ ಎನ್ಎಲ್ಬಿಸಿ ಕಾಲುವೆಗೆ ನಿರಂತರವಾಗಿ ನೀರು ಹರಿಸಲು ಸೂಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ನಿಗದಿತ ನಿಯಮದ ಪ್ರಕಾರ ಭಾನುವಾರ(ನ.17) ಕಾಲುವೆ ನೀರು ಸ್ಥಗಿತಗೊಳಿಸಬೇಕಾಗಿತ್ತು.
ಆದರೆ ರೈತರ ಹಿತದೃಷ್ಟಿಯಿಂದ ನ.17ರಿಂದ 20ರವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸಲು ನಿಗಮದ ಅಧಿಕಾರಿಗಳಿಗೆ ಶನಿವಾರ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸೂಚಿಸಿದೆ ಎಂದು ತಿಳಿಸಿದರು.
ಬೇಸಿಗೆ ಹಂಗಾಮಿನ ಬೆಳೆಗೆ ಡಿಸೆಂಬರ್ 9ರಿಂದ ಮಾರ್ಚ್ 25ರವರೆಗೆ ನೀರು ಹರಿಸಲು ಸಲಹಾ ಸಮಿತಿ ಸಭೆಯಲ್ಲಿ 14 ದಿನ ನೀರು ಹರಿಸಿ 10 ದಿನ ಕಾಲುವೆ ನೀರು ಸ್ಥಗಿತಗೊಳಿಸಿ ವಾರಬಂದಿ ನಿಯಮದ ವೇಳಾ ಪಟ್ಟಿಯಂತೆ ನೀರು ಹರಿಸಲು ನಿರ್ಧರಿಸಿದೆ. ರೈತರು ನಿಗದಿಪಡಿಸಿದ ಅವಧಿಯಲ್ಲಿ ಬರುವ ಬೆಳೆಯನ್ನು ಹಾಕಿಕೊಳ್ಳಬೇಕು. ಅನವಶ್ಯಕವಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

