ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿಗೆ ಯತ್ನಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ನಿವಾಸಿಗಳಾದ ಸುಷ್ಮಿತಾ, ಚನ್ನಬಸಪ್ಪ, ಕೃಷ್ಣಾ ಹಾಗೂ ರಾಹುಲ್ ಬಂಧಿತರು. ಆರೋಪಿ ಸಂಜನಾ ತಲೆಮರೆಸಿಕೊಂಡಿದ್ದಾರೆ. ಸಂಚು ರೂಪಿಸಿದ್ದರು: ವೃತ್ತಿಯಲ್ಲಿ ಶುಶ್ರೂಷಕಿ ಆಗಿದ್ದ ಸುಷ್ಮಿತಾ, ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿರುವ 66 ವರ್ಷದ ಉದ್ಯಮಿಯೊಬ್ಬರ ಸ್ನೇಹ ಬೆಳೆಸಿದ್ದರು. ಕ್ರಮೇಣ ಸಲುಗೆಗೆ ತಿರುಗಿತ್ತು. ಕಷ್ಟ ಎಂದು ಕೆಲ ದಿನಗಳ ಹಿಂದೆ ಆರ್ಥಿಕ ನೆರವು ಕೇಳಿದ್ದರು. ಈ ಬಗ್ಗೆ ಮಾತನಾಡಬೇಕಿದೆ ಎಂದು ಉದ್ಯಮಿಯನ್ನು ಅಪಾರ್ಟ್ಮೆಂಟ್ಗೆ ಕರೆಸಿಕೊಂಡು ತನ್ನೊಂದಿಗೆ ಬಂದಿದ್ದ ಸಂಜನಾ ಅವರನ್ನು ಉದ್ಯಮಿಯಿದ್ದ ಕೊಠಡಿಯೊಳಗೆ ಕಳಿಸಿದ್ದರು. ‘ಯುವತಿಯೊಂದಿಗೆ ಅರೆಬೆತ್ತಲೆ ಸ್ಥಿತಿಯಲ್ಲಿದ್ದಾಗ ಕೊಠಡಿಗೆ ನುಗ್ಗಿ ಮೊಬೈಲ್ನಲ್ಲಿ ವಿಡಿಯೊ ಮಾಡಿಕೊಂಡಿದ್ದರು. ₹ 25 ಲಕ್ಷ ನೀಡದಿದ್ದರೆ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದರು. ₹ 12 ಲಕ್ಷ ನೀಡುವುದಾಗಿ ಹೇಳಿ ಬಂದಿದ್ದೆ. ಬಳಿಕ ನನ್ನಿಂದ ₹ 1 ಲಕ್ಷ ಪಡೆದಿದ್ದರು’ ಎಂದು ಉದ್ಯಮಿ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

