ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯದ ನೆಪವೊಡ್ಡಿ ತನ್ನದೇ ಸಹೋದ್ಯೋಗಿಗಳಿಗೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ ಘಟನೆ ರಾಜ್ಯ ಪೊಲೀಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಂಬಂಧಿಸಿದ ಪಿಎಸ್ಐ ನೇತ್ರಾವತಿ ವಿರುದ್ಧ ಕೊನೆಗೂ ಶಿಸ್ತು ಕ್ರಮ ಜರುಗಿಸಲಾಗಿದೆ…
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪಿಎಸ್ಐ ನೇತ್ರಾವತಿ ಅವರು ಸಿಬ್ಬಂದಿಗಳ ಮೇಲೆ ದರ್ಪ ತೋರಿದ ಆರೋಪ ಕೇಳಿಬಂದಿತ್ತು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕಾರಣ ನೀಡಿ,..

ಒಬ್ಬ ಎಎಸ್ಐ ಸೇರಿದಂತೆ ಒಟ್ಟು 12 ಮಂದಿ ಸಿಬ್ಬಂದಿಗೆ ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಶಿಕ್ಷೆ ವಿಧಿಸಿದ್ದಾಗಿ ತಿಳಿದುಬಂದಿದೆ…
ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಸುಡುವ ಬಿಸಿಲಿನಲ್ಲಿ ಬಂದೂಕು ಹಿಡಿದು ನಿಲ್ಲುವಂತೆ ಆದೇಶ ನೀಡಲಾಗಿದ್ದು, ಇದರಿಂದ ಸಿಬ್ಬಂದಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ. ಏಪ್ರಿಲ್ ತಿಂಗಳ ಬಿಸಿಲಿನ ತಾಪ ತಾಳಲಾರದೆ ಕೆಲವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಉಂಟಾಯಿತು…
ಈ ಅಮಾನವೀಯ ಕ್ರಮದಿಂದ ಬೇಸತ್ತ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ…
ಘಟನೆಯ ಗಂಭೀರತೆಯನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ತಕ್ಷಣ ತನಿಖೆಗೆ ಆದೇಶಿಸಿದ್ದು, ಡಿವೈಎಸ್ಪಿ ಅರುಣ್ ಗೌಡ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಪ್ರಾಥಮಿಕ ವರದಿಯಲ್ಲಿ ಪಿಎಸ್ಐ ನೇತ್ರಾವತಿ ಅವರ ನಡೆ ದೃಢಪಟ್ಟ ಹಿನ್ನೆಲೆ.. ಅವರನ್ನು ಚಿಕ್ಕಜಾಜೂರು ಠಾಣೆಯಿಂದ ಚಿತ್ರದುರ್ಗದ ಪೊಲೀಸ್ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ…
ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯವಾದರೂ, ಅಮಾನವೀಯ ಶಿಕ್ಷೆಗೆ ಅವಕಾಶ ಇಲ್ಲ ಎಂಬ ಸಂದೇಶವನ್ನು ಈ ಕ್ರಮದ ಮೂಲಕ ರವಾನಿಸಲಾಗಿದೆ. ಸದ್ಯ ಈ ಘಟನೆ ರಾಜ್ಯ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

