ಧಾರವಾಡ: ಸತತ 4 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದ ರೈತರಿಗೆ ಸಾಲಮನ್ನಾ ಯೋಜನೆ ವರದಾನವಾಗುತ್ತೆ ಎಂದು ನಂಬಿರುವ ರೈತರಿಗೆ ಸಂಕಷ್ಟ ಎದುರಾಗಿದೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯು ಜನರಿಗೆ ಮಾತ್ರ ನಿಲುಕದ ನಕ್ಷತ್ರವಾಗಿ ಪರಿಣಮಿಸಿದೆ.ಇತ್ತ ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದ ಸಮ್ಮಿಶ್ರ ಸರ್ಕಾರ ಮುಳುಗುವ ದೋಣಿಯಾಗಿದ್ದರೆ, ಅವರ ಸಾಲಮನ್ನಾ ಯೋಜನೆ ಮಣ್ಣುಪಾಲಾದಂತೆ ಕಾಣುತ್ತಿದೆ. ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ ಧಾರವಾಡ ಜಿಲ್ಲೆಗೆ ಬರಬೇಕಾದ 95 ಕೋಟಿ ರೂಪಾಯಿ ಬಾಕಿ ಇದೆ. ಸದ್ಯಕ್ಕೆ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿದ್ದ ರೈತರಿಗೆ ಮರಳಿ ಹೊಸದಾಗಿ ಸಾಲವೂ ಸಿಗದೆ, ಇತ್ತ ಹಳೆಯ ಸಾಲವೂ ಮನ್ನಾ ಆಗದೇ ಸಂಕಷ್ಟಕ್ಕೆ ಸಿಲುಕಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ.ಒಟ್ಟು ಧಾರವಾಡ ಜಿಲ್ಲೆಯಲ್ಲಿ 53 ಸಾವಿರಕ್ಕೂ ಅಧಿಕ ರೈತರು ಸಾಲಮನ್ನಾಗೆ ಅರ್ಹರಿದ್ದಾರೆ. ಸರ್ಕಾರ ಒಟ್ಟು 205 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕಿತ್ತು. ಇದರ ಪೈಕಿ ಸರ್ಕಾರ ಕೇವಲ 110 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಉಳಿದ 95 ಕೋಟಿ ರೂಪಾಯಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಈ ಕ್ರಮ ರೈತರನ್ನು ಕಂಗೆಡಿಸಿದೆ ಹಾಗೂ ರೈತರನ್ನು ಬ್ಯಾಂಕ್ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವಂತೆ ಮಾಡಿದೆ.ಅತ್ತ ಸರ್ಕಾರ ಉಳಿಯುತ್ತೋ ಇಲ್ಲವೋ ಎನ್ನುತ್ತಾ ಸಿಎಂ ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಪ್ರಶ್ನಿಸಬೇಕಾದ ವಿರೋಧ ಪಕ್ಷವಾದ ಬಿಜೆಪಿ ಅಧಿಕಾರದ ಹಿಡಿಯಲು ಮುಂದಾಗಿದೆ. ಹೀಗಾಗಿ ಗಂಡ-ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯಿತು ಎಂಬ ಸ್ಥಿತಿಯಲ್ಲಿ ರೈತರು ಪರದಾಡುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





