ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈ ರೀತಿ ಗಣೇಶ ಮೂರ್ತಿ ತಯಾರಿಕೆಗೆ ಕಡಿವಾಣ ಹಾಕಿದರೂ ಕೂಡ ನಗರದ ಹೊರವಲಯದ ಗಬ್ಬೂರು ಬೈಪಾಸ್ ಬಳಿ ರಾಜಾರೋಷವಾಗಿ ಗಣೇಶ ಮೂರ್ತಿ ತಯಾರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಧಾರವಾಡ ಜಿಲ್ಲಾಡಳಿತ ಪಿಒಪಿ ಗಣೇಶ ಮೂರ್ತಿ ತಯಾರಿಕೆಗೆ ಕಡಿವಾಣ ಹಾಕುವ ಹಿನ್ನೆಲೆ ಸೂಚನೆ ನೀಡಿದ್ದರೂ ಕೂಡ ಯಾವುದೇ ನಿಯಮ ಪರಿಪಾಲನೆಯಾಗದೇ ಮೂರ್ತಿಯ ತಯಾರಿಕೆ ಮುಂದುವರೆದಿದೆ. ಅಷ್ಟೇ ಅಲ್ಲದೆ ಅನ್ಯ ರಾಜ್ಯ ಹಾಗೂ ಜಿಲ್ಲೆಗಳಿಂದ ಗಣೇಶ ಮೂರ್ತಿಗಳನ್ನು ತರಿಸಿಕೊಂಡು ಸಂಗ್ರಹಿಸಿಡಲಾಗುತ್ತಿದೆ. ಹು-ಧಾ ಮಹಾನಗರದಲ್ಲಿ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ನಡೆಯುವ ಸಭೆಗಳು ನೆಪ ಮಾತ್ರವಾಗಿದ್ದು, ಕೊಂಚ ಕೂಡ ಉಪಯೋಗಕ್ಕೆ ಬಾರದಂತಾಗಿವೆ ಎನ್ನಲಾಗಿದೆ.ಹಲವು ಕಡೆಗಳಲ್ಲಿ ತೆರೆಮರೆಯಲ್ಲಿ ಇಂತಹ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ನಡೆಯುತ್ತಿದ್ದರು ಕೂಡ ಸ್ಥಳೀಯ ಆಡಳಿತ ಮಂಡಳಿ ಕಾಳಜಿ ವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪರಿಸರ ಸಂರಕ್ಷಣಾ ಅಧಿಕಾರಿಗಳು ಎಚ್ಚೆತ್ತುಕೊಂಡು ಪಿಒಪಿ ಗಣೇಶ ಮೂರ್ತಿ ತಯಾರಿಕಾ ಘಟಕ, ಮಾರಾಟಗಾರರಿಗೆ ಕಡಿವಾಣ ಹಾಕಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





