ಹುಬ್ಬಳ್ಳಿಯ ಶ್ರೀ ಮೂರುಸಾವಿರಮಠದ ಧಾರ್ಮಿಕ, ಆಧ್ಯಾತ್ಮಿಕ, ವಚನ ಸಾಹಿತ್ಯಕ್ಕಷ್ಟೇ ಅಲ್ಲ, ಶೈಕ್ಷಣಿಕ ಕ್ರಾಂತಿಗೆ ತನ್ನದೇಯಾದ ಕೊಡುಗೆಯನ್ನ ನೀಡಿದೆ, ಇನ್ನೂ ನೀಡುತ್ತಲೇ ಇದೆ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರದಂದು ನಡೆಯ ಜಾತ್ರೆ ನಿಜಕ್ಕೂ ಭಕ್ತ ಸಾಗರವೇ ಹರಿದು ಬರುತ್ತೆ. ಗುರುವಿನ ತೇರನ್ನೆಳೆದು ಅಜ್ಜನ ಕೃಪೆಗೆ ಪಾತ್ರರಾಗುತ್ತೆ ಭಕ್ತಗಣ.
ವಾದ್ಯಗಳ ಅಬ್ಬರ. ಎಲ್ಲೆಡೆ ಹರ್ಷೋದ್ಘಾರ. ನೋಡಿದೆಲ್ಲೆಡೆ ಭಕ್ತ ಸಾಗರ.. ಸೋಮವಾರ ಹುಬ್ಬಳ್ಳಿಯ ಮೂರುಸಾವಿರಮಠದ ಕತೃ ಜಗದ್ಗುರು ಶ್ರೀ ಗುರುಸಿದ್ಧೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೀತು. ಶ್ರೀಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿ ಹಾಗೂ ಸಾವಿರಾರು ಭಕ್ತರು ಜಾತ್ರಾ ವೈಭವಕ್ಕೆ ಸಾಕ್ಷಿಯಾದರು. ಸಂಜೆ 5ಕ್ಕೆ ಕತೃ ಗದ್ದುಗೆಗೆ ವಿಶೇಷ ಪೂಜೆ ನಡೀತು. ಇದಕ್ಕೂ ಮೊದಲು ಮಧ್ಯಾಹ್ನ 3.30ಕ್ಕೆ ಶ್ರೀಮಠದಿಂದ ಓಲೇಮಠ ಮತ್ತು ಶ್ರೀಮಠದವರೆಗೂ ಪಲ್ಲಕ್ಕಿ ಉತ್ಸವ ನಡೀತು. ಇದಾದ್ಮೇಲೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಎಳೆಯಲಾಯಿತು. ಸಂಜೆ 7ಕ್ಕೆ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳ ರಜತ ಸಿಂಹಾಸನಾರೋಹಣ ನಡೆಯಿತು. ಇದನ್ನೆಲ್ಲ ಕಂಡ ಭಕ್ತರು ಪುನೀತರಾದರು. ಹರಹರ ಮಹಾದೇವ ಅನ್ನೋ ಜಯಘೋಷ ಮುಗಿಲಿಗೆ ಮುಟ್ಟುವಂತಿತ್ತು. 12 ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ನಂತರ ಶರಣ ಮತ್ತು ಶರಣೆಯರು ಗುಂಪು-ಗುಂಪಾಗಿ ಚದುರಿದ್ರು. ವಿಶಿಷ್ಟ ವಚನ ಸಾಹಿತ್ಯದ ಉಳಿವು ಮತ್ತು ಶರಣ-ಶರಣೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ರು. ಅದರಲ್ಲಿ ಮೂರುಸಾವಿರ ಸಂಖ್ಯೆ ಶರಣರುಳ್ಳ ಒಂದು ಗುಂಪು ಹುಬ್ಬಳ್ಳಿಯತ್ತ ಧಾವಿಸಿತ್ತು. ಪರಮಜ್ಞಾನಿ ಶ್ರೀ ಚನ್ನಬಸವಣ್ಣವರ ನೇತೃತ್ವದಲ್ಲಿ ಈ ಗುಂಪು ಹುಬ್ಬಳ್ಳಿಯ ಓಲೆಮಠದಲ್ಲಿ ವಚನಗಳ ತಾಡೋಲೆಗಳನ್ನ ಸಂರಕ್ಷಣೆ ಮಾಡಿತು. ಈ ಶರಣರ ಪೈಕಿ ಒಬ್ಬರಾದ ಶ್ರೀ ಗುರುಸಿದ್ಧಶಿವಯೋಗಿಗಳು ಮೂರುಸಾವಿರಮಠದ ಪವಿತ್ರ ಮಠದಲ್ಲಿ ನೆಲೆಸಿ ಜನಹಿತ ಕಾರ್ಯಕೈಗೊಂಡ್ರು. ಅಲ್ಲದೇ, ಸಕಲ ಜೀವರಾಶಿಗಳಿಗೂ ಒಳ್ಳೇಯದ್ದನ್ನು ಬಯಸಿದರು. ನಂಬಿದ ಭಕ್ತರ ಪಾಲಿಗೆ ಕಾಮಧೇನು, ಕಲ್ಪವೃಕ್ಷವಾದ್ರು. ಈ ಹಿನ್ನೆಲೆಯಲ್ಲಿಯೇ ಅವರ ನಿರ್ವಿಕಲ್ಪ ಸಮಾಧಿ ಹೊಂದಿದ ನಂತರವೂ ನಿತ್ಯ ಭಕ್ತರ ನೋವಿಗೆ ಸ್ಪಂದಿಸುವ ಪುಣ್ಯಕ್ಷೇತ್ರವಾಗಿ ಪರಿವರ್ತನೆಗೊಂಡಿತು.
ಮಹೇಶ ತೆಂಗಿನಕಾಯಿ, ಶ್ರೀಮಠದ ಭಕ್ತರು
ಈಗಲೂ ಸಹ ಮೂರುಸಾವಿರ ಮಠದ ಧರ್ಮ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ, ವೈದ್ಯಕೀಯ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿ ಈ ನಾಡಿಗೆ ಶ್ರೇಷ್ಠ ಕೊಡುಗೆ ನೀಡುತ್ತಲಿದೆ. ಗುರು ಪರಂಪರೆಯಲ್ಲಿ ಸಾಗಿ ಬಂದ ಅನೇಕ ಜಗದ್ಗುರು ಮಹಾಸನ್ನಿಧಿಯವರು ಬಸವ ತತ್ವ ಪ್ರಸಾರದೊಂದಿಗೆ ನಿರಂತರವಾಗಿ ಅರ್ಚನ, ಅರ್ಪಣ, ಅನುಭಾವಗಳನ್ನು ನಡೆಸಿಕೊಂಡು ಬಂದರು. ಇಂದೀಗ ಮೂರುಸಾವಿರಮಠವು ಪೀಠಾಧಿಪತಿಗಳ ನೇತೃತ್ವದಲ್ಲಿ ಮಾನವ ಕಲ್ಯಾಣದ ಮಹತ್ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿವೆ. ಮಹಿಳಾ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿರುವ ಶ್ರೀಮಠವು ಶಿಶು ವಿಹಾರದಿಂದ ಪದವಿಮಟ್ಟದವರೆಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಲಲಿತ ಕಲೆ ಹಾಗೂ ಕೈಗರಿಕಾ ತರಬೇತಿ ಕೇಂದ್ರಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿ ವರ್ಷದ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಶ್ರೀ ಗುರುಸಿದ್ಧೇಶ್ವರ ಜಾತ್ರೆ, ರಥೋತ್ಸವ ವೈಭೋಗದಿಂದಲೇ ನಡೆಸಲಾಗುತ್ತಿದೆ.
ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಪೀಠಾಧಿಪತಿ, ಮೂರುಸಾವಿರಮಠ
ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಈಗಲೂ ಮೂರುಸಾವಿರಮಠ ಎಲ್ಲ ಜಾತಿ-ಧರ್ಮದವರಿಗೂ ಮುಕ್ತವಾಗಿದೆ. ಹಾಗಾಗಿಯೇ ಸಾವಿರಾರು ಭಕ್ತರು ಈಗಲೂ ಶ್ರೀಮಠದ ಭಕ್ತರಾಗಿದಾರೆ. ಜಾತ್ರೆ ಬಂದ್ರಂತೂ ಭಕ್ತರ ಸಂಖ್ಯೆ ಸಾಗರೋಪಾದಿಯಲ್ಲಿ ಸೇರುತ್ತೆ. ಶ್ರೀ ಗುರುವಿನ ದರ್ಶನ ಪಡೆದು ಭಕ್ತರು ಕೃತಾರ್ಥರಾಗ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news




