ಧಾರವಾಡ: ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಯುವಕರು ಅಮಾಯಕರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ತನ್ವಿರ್ ಸೇರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಡದಲ್ಲಿ ಮಾತನಾಡಿರುವ ಅವರು, ಈಗ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ತನ್ನೀರ್ ಸೇರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರವನ್ನು ಬಿಜೆಪಿ ಸರ್ಕಾರ ಇದ್ದಾಗ ಅವರು ಬರೆಯಲಿಲ್ಲ. ಈಗ ಯಾಕೆ ಬರೆದಿದ್ದಾರೆ ಎಂದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ ಮುಸ್ಲಿಂ ತುಷ್ಟಿಕರಣ ಮಾಡುತ್ತದೆ. ಕಾಂಗ್ರೆಸ್ ಮುಸ್ಲಿಂರನ್ನು ಬಿಡುಗಡೆ ಮಾಡುತ್ತದೆ ಎಂಬ ಕಾರಣಕ್ಕೆ ಈಗ ಪತ್ರ ಬರೆದಿದ್ದಾರೆ ಎಂದು ಸೇರ್ ವಿರುದ್ಧ ಮುತಾಲಿಕ್ ಹರಿಹಾಯ್ದಿದ್ದಾರೆ.
ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದ್ದಾರೆ. ಮನೆ, ಅಂಗಡಿ ದೇವಸ್ಥಾನ ಒಡೆದು ಸುಟ್ಟು ಹಾಕಿದ್ದಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಗಲಾಟೆ ಮಾಡಲು ರಾತ್ರಿ 11 ಗಂಟೆಗೆ ಅಲ್ಲಿ ಯುವಕರು ಜಮಾಯಿಸಿದ್ದರು. ಪೊಲೀಸರ ಮೇಲೆ ಹಲ್ಲೆಯಾಗಿದೆ. ಪೊಲೀಸ್ ಠಾಣೆ ಸುಡುವ ಕೆಲಸ ಮಾಡಿದ್ದಾರೆ. ಒಬ್ಬ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೆ. ಇಂತಹವರು ಅಮಾಯಕರಾ? ಇವರನ್ನು ಈಗ ಬಿಡುಗಡೆ ಮಾಡಿದರೆ ನಾಳೆ ಇವರೇ ಉಗ್ರಗಾಮಿಗಳಾಗುತ್ತಾರೆ. ಹುಬ್ಬಳ್ಳಿ, ಶಿವಮೊಗ್ಗ ಸೇರಿ ಬೇರೆ ಬೇರೆ ಕಡೆ ಗಲಾಟೆ ಮಾಡಿದವರು ಅಮಾಯಕರು ಎನ್ನುವ ಮಾತೇ ಇಲ್ಲ. ಉದ್ದೇಶಪೂರ್ವಕವಾಗಿಯೇ ಅವರು ಗಲಾಟೆ ಮಾಡಿದ್ದರು. ಇದಕ್ಕೆ ದಾಖಲೆ ಇವೆ. ಕಾಂಗ್ರೆಸ್ ಇದನ್ನು ನಿರ್ಲಕ್ಷ್ಯ ಮಾಡಬಾರದು.ಇಂತಹವರನ್ನು ಬಿಡುಗಡೆ ಮಾಡುವ ಹುನ್ನಾರ ನಡೆಸಿದರೆ ಶ್ರೀರಾಮ ಸೇನೆ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





