ಬೆಂಗಳೂರು: ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದ ಅಡಿ ಸರ್ಕಾರ್ ಸಿನಿಮಾದ ನಟ ಜಗದೀಶ್ ಹೊಸ್ಮಠ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 23 ರಂದು ಸಂಜೆ ಖಚಿತ ಮಾಹಿತಿ ಆಧರಿಸಿ ಜಗದೀಶ್ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಗದೀಶ್ ಹೊಸ್ಮಠ ಅಲಿಯಾಸ್ ಜಾಗ್ವಾರ್ ಜಗ್ಗ ಹಾಗೂ ಮೊಹಮ್ಮದ್ ನಿಜಾಮ್ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್ ಸೇರಿ 10 ಬುಲೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಬಂಧಿತ ಜಗದೀಶ್, ನಿಜಾಮ್ ವಿಚಾರಣೆ ನಡೆಸಿದ ಪೊಲೀಸರು ಅವರು ನೀಡಿದ ಮಾಹಿತಿ ಮೇರೆಗೆ ಇನ್ನಿಬ್ಬರು ಆರೋಪಿಗಳಾದ ಸತೀಶ್ ಮತ್ತು ಸೈಯದ್ನನ್ನು ಬಂಧಿಸಿದ್ದಾರೆ. ಬಂಧಿತ ಇನ್ನಿಬ್ಬರು ಆರೋಪಿಗಳಿಂದ ಮತ್ತೊಂದು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿ ಸೈಯದ್ ₹ 1 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ನೀಡಿದ್ದ ವ್ಯಕ್ತಿ ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದ. ಆದ್ರೆ ಸೈಯದ್ ಹಣ ವಾಪಾಸ್ ಕೊಡದೇ ಇದ್ದಾಗ ಕೊಲೆ ಮಾಡ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದ. ಬೆದರಿಕೆಗೆ ಹೆದರಿದ ಸೈಯದ್, ಬಿಹಾರದಿಂದ ₹ 3 ಲಕ್ಷ ರೂಪಾಯಿ ಕೊಟ್ಟು ಧಾರವಾಡಕ್ಕೆ ಪಿಸ್ತೂಲ್ ತರಿಸಿಕೊಂಡಿದ್ದ. ಇನ್ನು ಜಗದೀಶ್ ಹುಬ್ಬಳ್ಳಿಯಿಂದ ಬರುವಾಗ ಈ ಪಿಸ್ತೂಲ್ ಅನ್ನ ಬೆಂಗಳೂರಿಗೆ ತಂದಿದ್ದ. ಸದ್ಯ ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





