ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಬಹಳ ಒಳ್ಳೆಯವರು. ಅವರನ್ನು ಕೊಲೆ ಮಾಡುವ ಮೂಲಕ ನನ್ನ ಗಂಡ ತಪ್ಪು ಮಾಡಿದ್ದಾರೆ. ಆದರೆ, ಕೊಲೆಗೆ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಹೇಳಿದರು.
ನಗರದಲ್ಲಿಂದು ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಮಗೂ ಗುರೂಜಿಗೂ ಯಾವುದೇ ಗಲಾಟೆ ಇರಲಿಲ್ಲ. ಅಪಾರ್ಟ್ಮೆಂಟ್ ನನ್ನ ಹೆಸರಲ್ಲಿದೆ ಎನ್ನುವುದು ಸುಳ್ಳು. ಬ್ಯಾಂಕ್ನಲ್ಲಿ ಸಾಲ ಮಾಡಿ ಪ್ಲ್ಯಾಟ್ ಖರೀದಿ ಮಾಡಿದ್ದೇವೆ ಎಂದರು.
ನಾನು 2005ರಲ್ಲಿ ಸರಳ ಜೀವನ ಸಂಸ್ಥೆ ಸೇರಿಕೊಂಡಿದ್ದೆ. 2019ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ನನ್ನ ಪತಿ ಕೂಡಾ 2016ರಲ್ಲಿ ಕೆಲಸ ಬಿಟ್ಟಿದ್ದರು. ಯಾಕೆ ಬಿಟ್ಟಿದ್ದರು ಎಂಬುದು ಗೊತ್ತಿಲ್ಲ. ಪತಿ ಹೆಸರಿನಲ್ಲಿ ಗುರೂಜಿ ಆಸ್ತಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ನಾಲ್ಕೈದು ದಿನಗಳಿಂದ ಪತಿ ಮನೆಗೆ ಬಂದಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗ, ಕೆಲಸದಲ್ಲಿದ್ದೇನೆ ಎನ್ನುತ್ತಿದ್ದರು. ಆದರೆ, ಮಂಗಳವಾರ ಬೆಳಿಗ್ಗೆ ಟಿ.ವಿ.ಯಲ್ಲಿ ನೋಡಿದಾಗಲೇ ಅವರು ಸ್ವಾಮೀಜಿ ಅವರನ್ನು ಕೊಲೆ ಮಾಡಿರುವ ವಿಷಯ ಗೊತ್ತಾಯಿತು. ನಂತರ, ವಿದ್ಯಾನಗರ ಠಾಣೆ ಪೊಲೀಸರು ವಿಚಾರಣೆಗೆ ಕರೆದಾಗ ಹೋಗಿ ನನಗೆ ಗೊತ್ತಿದ್ದನ್ನು ಹೇಳಿದ್ದೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





