ಧಾರವಾಡ: ರಾಜ್ಯದಲ್ಲಿ ಎಸ್ಡಿಪಿಐ, ಪಿಎಫ್ಐ ಸೇರಿದಂತೆ ಇತರ ಸಂಘಟನೆಗಳು ಬ್ಯಾನ್ ಆಗಬೇಕು ಎಂಬ ವಿಚಾರಕ್ಕೆ ನನ್ನ ಬೆಂಬಲವೂ ಇದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸಂಘಟನೆಗಳು ಮಾತ್ರ ಬ್ಯಾನ್ ಆದರೆ ಸಾಲದು ಸಂಘಟನೆ ಹಾಗೂ ಸಂಘಟನೆಯಲ್ಲಿರುವವರ ಮೇಲೂ ಕ್ರಮ ಆಗಬೇಕು. ಒಂದು ಸಂಘಟನೆ ಬ್ಯಾನ್ ಆದರೆ ಇನ್ನೊಂದು ಸಂಘಟನೆಯಲ್ಲಿ ಬಂದು ಸೇರಿಕೊಳ್ಳುತ್ತಾರೆ. ಹೀಗಾಗಿ ಸಂಘಟನೆಯಲ್ಲಿರುವವರ ಮೇಲೂ ಕ್ರಮ ಆಗಬೇಕು ಎಂದು ಬೆಲ್ಲದ ಒತ್ತಾಯಿಸಿದರು.
ಮಂಗಳೂರಿನಲ್ಲಿ ಪ್ರವೀಣ್ ಹತ್ಯೆ ನಡೆಯಬಾರದಿತ್ತು. ಇದು ನಮಗೂ ಮನಸ್ಸಿಗೆ ನೋವು ತರಿಸಿದೆ. ನಾವು ಏನೇ ಇದ್ದರೂ ಪಕ್ಷದ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರು. ಕಾರ್ಯಕರ್ತರಿಂದಲೇ ನಾವು ಈ ಸ್ಥಾನ ತಲುಪಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 20 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಇದರಿಂದಾಗಿಯೇ ಜನ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ನಮ್ಮ ಅವಧಿಯಲ್ಲೂ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿರುವುದಕ್ಕೆ ನಮ್ಮ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಸಿಎಂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕಾನೂನಿನ ಬಗ್ಗೆ ಹೆದರಿಕೆ ಹುಟ್ಟುವಂತೆ ನಾವು ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕರ್ತರ ಹತ್ಯೆಯಿಂದಾಗಿ ನಮ್ಮ ಉಳಿದ ಕಾರ್ಯಕರ್ತರು ಮನನೊಂದು ರಾಜೀನಾಮೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಅವರ ಮನವೊಲಿಸಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಅವರ ಮನಸ್ಸಿಗೆ ಸಮಾಧಾನ ಆಗುವ ರೀತಿಯಲ್ಲಿ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ಗೃಹ ಸಚಿವರು ವಿಫಲರಾಗಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕೆಲಸವೇ ಟೀಕೆ ಮಾಡುವುದು ಎಂದರು.
ನಮ್ಮ ಸರ್ಕಾರ ಗಲಭೆ ಎಬ್ಬಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ. ಕೊಲೆಗಡುಕರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಆಗಬೇಕು ಎಂಬುದಕ್ಕೆ ನನ್ನ ಒತ್ತಾಯವೂ ಇದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





