ಹುಬ್ಬಳ್ಳಿ: ರಾಷ್ಟ್ರಪತಿಗಳ ಹುಬ್ಬಳ್ಳಿ ಕಾರ್ಯಕ್ರಮದ ಸಿದ್ದತೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಅವ್ಯವಹಾರಗಳಿಗೆ ಆಸ್ಪದ ನೀಡುವುದಿಲ್ಲ. ಪ್ರತಿ ವ್ಯವಹಾರವನ್ನು ಚೆಕ್ ಮೂಲಕವೇ ನಡೆಸಲಾಗುವುದು ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.
ನಗರದ ದೇಶಪಾಂಡೆ ನಗರದ ಜಿಮ್ ಖಾನಾ ಮೈದಾನದಲ್ಲಿ ಆಯೋಜಿಸಿರುವ ರಾಷ್ಟ್ರಪತಿಗೆ ಪೌರ ಸನ್ಮಾನ ಕಾರ್ಯಕ್ರಮದ ಸಿದ್ದತೆ ಕಾರ್ಯ ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದತೆ ಕಾಮಗಾರಿ ಆರಂಭಿಸಿದ ನಂತರ ಕೊಟೇಶನ್ ಆಹ್ವಾನ ಮಾಡಿರುವ ಹಿಂದೆ ಯಾವುದೇ ದುರುದ್ದೇಶವಿಲ್ಲ. ಜಿಲ್ಲಾಡಳಿತ ನಿಯಂತ್ರಣದ ನಿರ್ಮಿತಿ ಕೇಂದ್ರಕ್ಕೆ ಎರಡು ಕೋಟಿ ಒಳಗೆ ಖರ್ಚು ಮಾಡಲು ವಿನಾಯತಿ ಇದ್ದು, ಆ ಮೂಲಕ ಸಿದ್ದತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮೇಯರ್ ಸ್ಪಷ್ಟಪಡಿಸಿದರು. ಹೀಗಿದ್ದರೂ ಕೊಟೇಶನ್ ಕರೆದಿರುವ ಉದ್ದೇಶದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೇಯರ್ ವಿಚಲಿತರಾದರು.
ರಾಷ್ಟ್ರಪತಿಗಳ ಮೈಸೂರು ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಲ್ಲಿ ನಡೆಯುತ್ತಿರುವ ಸಿದ್ದತೆಯಂತೆ ಹುಬ್ಬಳ್ಳಿ ಕಾರ್ಯಕ್ರಮದಲ್ಲೂ ಮಾಡಲಾಗುತ್ತಿದೆ. ಅಲ್ಲಿನ ಕಮಿಷನರ್ ಹಾಗೂ ನಮ್ಮ ಕಮಿಷನರ್ ಕಾರ್ಯಕ್ರಮ ಸಿದ್ದತೆ ಕಾಮಗಾರಿ ಬಗ್ಗೆ ಚರ್ಚಿಸಿದ್ದಾರೆ ಎಂದು ಈರೇಶ ಅಂಚಟಗೇರಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾಧ್ಯಮದವರು ಹು-ಧಾ ಮಹಾನಗರ ಪಾಲಿಕೆ ಕಮಿಷನರ್ ಆ ವೇಳೆ ರಾಜ್ಯದಲ್ಲಿ ಇರಲಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರ ಕೊಡಲಿಲ್ಲ.
ಇನ್ನೂ ರಾಷ್ಟ್ರಪತಿಗಳಿಗೆ ಸನ್ಮಾನಿಸುವುದು ಹುಬ್ಬಳ್ಳಿ-ಧಾರವಾಡ ಮಹಾನಗರದ 12 ಲಕ್ಷ ನಾಗರಿಕರ ಬಹುದಿನಗಳ ಬೇಡಿಕೆ ಆಗಿತ್ತು. ನಮ್ಮ ಬೇಡಿಕೆಗೆ ಸ್ಪಂದಿಸಿ ರಾಷ್ಟ್ರಪತಿಗಳು ನಗರಕ್ಕೆ ಬರುತ್ತಿದ್ದಾರೆ. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಸ್ತುವಾರಿ ಸಚಿವರು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲ ನಗರದ ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ಮುಂತಾದ ಗಣ್ಯಮಾನ್ಯರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ 5000 ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ಕೆಲಸ ಆಗಿದೆ ಎಂದರು.
ಅಂದು ರಾಷ್ಟ್ರಪತಿಗಳಿಗೆ ಸಿದ್ದಾರೋಢರ ಬೆಳ್ಳಿ ಪ್ರತಿಮೆ, ಪುಸ್ತಕ, ಧಾರವಾಡ ಫೇಡಾ ನೆನಪಿನ ಕಾಣಿಕೆಯಾಗಿ ನೀಡುತ್ತಿದ್ದೇವೆ. ಅಂದು ಎಲ್ಲ ಪಾಲಕೆಯ 81 ಸದಸ್ಯರೊಂದಿಗೆ ಫೋಟೋ ತೆಗೆದುಕೊಳ್ಳಲಾಗುವುದು ಎಂದು ಈರೇಶ ಅಂಚಟಗೇರಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

