ಹುಬ್ಬಳ್ಳಿ: ಅವರೆಲ್ಲರೂ ತಮ್ಮ ಮಕ್ಕಳು ಹುಬ್ಬಳ್ಳಿಯಂತ ಪಟ್ಟಣದಲ್ಲಿ ಚನ್ನಾಗಿ ಓದಬೇಕು ಎಂದುಕೊಂಡವರು. ದೂರದ ಊರಲ್ಲಿ ಮಕ್ಕಳು ಓದುತ್ತಿದ್ದಾರೆ ಅವರ ಭವಿಷ್ಯ ಉಜ್ವಲವಾಗಲಿ ಅಂತ ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡಿದ ಹೆತ್ತವರು. ಈಗ ಹಾಸ್ಟೆಲ್ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣೀರು ಹಾಕುವಂತಾಗಿದೆ. ಮೊದಲು ಹಾಸ್ಟೆಲ್ ಉಚಿತ ಎಂದಿದ್ದ ಶಾಲೆಯ ಆಡಳಿತ ಮಂಡಳಿ ಈಗ ಫೀಸ್ ತುಂಬಲು ಟೈಮ್ ಬಾಂಡ್ ಕೊಟ್ಟಿದ್ದಾರೆ ಎಂಬ ಆರೋಪ ಮಾಡಿದ ಪಾಲಕರು ಈಗ ಶಾಲೆಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಾಸ್ಟೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಯಡವಟ್ಟು ಮಾಡಿದ್ದು, ವಿದ್ಯಾರ್ಥಿಗಳ ಪಾಲಕರಿಗೆ ಸಂಕಷ್ಟ ತಂದೊಡ್ಡಿದೆ. ಹೌದು.. ಶಾಲೆಗೆ ಪ್ರವೇಶ ಪಡೆದ ಹಾವೇರಿ ಜಿಲ್ಲೆಯ 14 ಮಕ್ಕಳಿಗೆ ಹಾಸ್ಟೆಲ್ ನಲ್ಲಿರಲು ತಿಂಗಳಿಗೆ 2500 ಹಣವನ್ನು ಪಾವತಿಸಬೇಕು ಎಂದು ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಆತಂಕಗೊಂಡ ಪಾಲಕರು ಶಿಕ್ಷಣ ಸಂಸ್ಥೆಗೆ ಆಗಮಿಸಿ ಮೊದಲು ಉಚಿತ ಎಂದು ಪ್ರವೇಶ ನೀಡಿ ಈಗ ಹಣ ಪಾವತಿಸಲು ಹೇಳಿರುವುದು ಸರಿಯಲ್ಲ. ಹಣಕೊಟ್ಟು ಓದಿಸುವುದಾದರೇ ನಮ್ಮ ಊರಲ್ಲಿಯೇ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದೇವು. ನಮಗೆ ಹಣ ಕೊಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇನ್ನೂ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿರುವ ಮಹಿಳಾ ವಿದ್ಯಾಪೀಠದ ಹಾಸ್ಟೆಲ್ ನಲ್ಲಿ ಎಸ್.ಟಿ ಕೋಟಾದ ಸೀಟ್ ಫುಲ್ ಆಗಿವೆ. ಎಸ್.ಸಿ ಕೋಟಾದಲ್ಲಿ ಎಂಟು ಸೀಟ್ ಬಾಕಿ ಇವೆ. ಆದರೆ ಹಾವೇರಿ ಜಿಲ್ಲೆಯಿಂದ ಬಂದಿರುವ ಹದಿನಾಲ್ಕು ವಿದ್ಯಾರ್ಥಿಗಳು ಎಸ್ಟಿ ಕೋಟಾದಲ್ಲಿ ಪ್ರವೇಶ ಪಡೆದಿದ್ದು, ಎಸ್ಟಿ ಕೋಟಾದ ಸೀಟ್ ಫುಲ್ ಆಗಿವೆ. ಆದ್ದರಿಂದ ಹಣ ಪಾವತಿಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಒಟ್ಟು 50 ಸೀಟ್ ಪ್ರವೇಶ ಹೊಂದಿರುವ ಹಾಸ್ಟೆಲ್ ನಲ್ಲಿ ಎಸ್.ಸಿ ಕೋಟಾದಲ್ಲಿ 36 ಎಸ್.ಟಿ ಕೋಟಾದಲ್ಲಿ 12 ಹಾಗೂ ಓಬಿಸಿ 2 ಸೀಟ್ ತೆಗೆದುಕೊಳ್ಳಲಾಗುತ್ತದೆ. ಎಸ್.ಟಿ ಕೋಟಾ ಫುಲ್ ಆಗಿದ್ದು, ಹಣ ಪಾವತಿಸಲು ಸೂಚನೆ ನೀಡಿದ್ದು, ಇದರಿಂದ ಪಾಲಕರು ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಆತಂಕ ಹುಟ್ಟು ಹಾಕಿದ್ದು, ನಾವು ಎಲ್ಲಿ ವಾಸಮಾಡಿ ಶಾಲೆ ಕಲಿಯಬೇಕು ಎಂಬುವುದು ವಿದ್ಯಾರ್ಥಿಗಳ ಆತಂಕದ ಮಾತಾಗಿದೆ. ಒಟ್ಟಿನಲ್ಲಿ ಹಾಸ್ಟೆಲ್ ಪೀಸ್ ವಿಚಾರಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾಕಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ ಆಡಳಿತ ಮಂಡಳಿ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಕಾರ್ಯಗತವಾಗುತ್ತದೆಯೋ ಗೊತ್ತಿಲ್ಲ. ಆದರೆ ಕಲಿಯಲು ದೂರದ ಊರಿಂದ ಬಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಬರ ಸಿಡಿಲು ಬಡೆದಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





