ತುಮಕೂರು : ಮೂಢನಂಬಿಕೆಗೆ ನವಜಾತ ಶಿಶುವೊಂದು ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ. ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿನಂತೆ ಮಗು ಮತ್ತು ತಾಯಿಯನ್ನು ಊರ ಹೊರಗಡೆ ಇರುವ ಗುಡಿಸಲಿನಲ್ಲಿ ಇರಿಸಲಾಗಿತ್ತು. ಇವರ ಕಟ್ಟುಪಾಡಿಗೆ ವಸಂತ ಎಂಬವರ ಅವಳಿ ಮಕ್ಕಳಲ್ಲಿ 10 ದಿನಗಳ ಹೆಣ್ಣು ಮಗುವೊಂದು ಸಾವಿಗೀಡಾಗಿದೆ.
ಕಾಡುಗೊಲ್ಲ ಸಮುದಾಯದವರು ಬಾಣಂತಿಯರನ್ನು ಗ್ರಾಮದ ಒಳಗೆ ಸೇರಿಸದೆ ಊರವರೆಗಿನ ಗುಡಿಸಲಿನಲ್ಲಿ ವಾಸ ಮಾಡಲು ಸೂಚಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಟ್ಟುಪಾಡು. ಕಳೆದ ಜುಲೈ 18ರಂದು ಊರ ಹೊರಗಿನ ಗುಡಿಸಿಲಿನಲ್ಲಿ ಬಾಣಂತಿ ಹಾಗೂ ಇಬ್ಬರು ಅವಳಿ ಮಕ್ಕಳನ್ನು ಇರಿಸಲಾಗಿತ್ತು. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಶೀತ ವಾತಾವರಣ ಹಾಗೂ ತುಂತುರು ಮಳೆ ಆಗುತ್ತಿದೆ. ಇದರಿಂದಾಗಿ ಮಗು ಮೃತಪಟ್ಟಿದೆ ಎನ್ನಲಾಗಿದೆ. ಇದು ಕಾಡುಗೊಲ್ಲ ಸಮುದಾಯದ ಆಚರಣೆಗಳಲ್ಲಿ ಒಂದು. ಇಂತಹ ಆಚರಣೆಯನ್ನು ಗೊಲ್ಲ ಸಮುದಾಯವು ಇಂದಿಗೂ ಮುಂದುವರೆಸಿಕೊಂಡು ಬಂದಿದೆ.
ವಸಂತ ಅವರು ತಮ್ಮ ಅವಳಿ ಮಕ್ಕಳೊಂದಿಗೆ ಊರ ಹೊರಗಿರುವ ಗುಡಿಸಲಿನಲ್ಲಿದ್ದರು. ತುಂತುರು ಮಳೆ, ಚಳಿ, ಗಾಳಿಯ ನಡುವೆ ಅವರು ಗುಡಿಸಲಿನಲ್ಲಿ ವಾಸವಿದ್ದರು. ಕಳೆದ ಕೆಲವು ದಿನಗಳ ಹಿಂದೆಷ್ಟೇ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇವರಿಗೆ ಹೆರಿಗೆ ಆಗಿತ್ತು. ಹೆರಿಗೆ ಮುಗಿಸಿ ಮರಳಿ ಗ್ರಾಮಕ್ಕೆ ಬಂದ ಇವರನ್ನು ಪೋಷಕರು ಮನೆಗೆ ಸೇರಿಸಿಕೊಂಡಿರಲಿಲ್ಲ. ಬಳಿಕ ಊರ ಹೊರಗಿನ ಗುಡಿಸಲಿಗೆ ಇವರನ್ನು ಕಳುಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





