ಬೆಂಗಳೂರು: ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಸಫಲವಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಯಾವುದೇ ರೋಡ್ ಶೋ ನಡೆಸದೇ, ಪಕ್ಷದ ಬಾವುಟ ಪ್ರದರ್ಶಿಸದೇ ಕೇವಲ ಇಸ್ರೋ ವಿಜ್ಞಾನಿಗಳ ಭೇಟಿಗೆ ಸೀಮಿತಗೊಳಿಸಿ ಪ್ರಧಾನಿ ಪ್ರವಾಸ ಆಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಾಳೆ ಬೆಳಗ್ಗೆ 6 ಗಂಟೆಗೆ ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಅವರಿಗೆ ಏರ್ಪೋರ್ಟ್ನಲ್ಲಿ ಸ್ವಾಗತ ಕೋರುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮೋದಿಯವರು ಮಾತನಾಡಬಹುದು. ಅದಕ್ಕಾಗಿ ಅರ್ಧ ಗಂಟೆ ಸಮಯ ಕಾಯ್ದಿರಿಸಲಾಗಿದೆ. ಆದರೆ ಮೋದಿ ಭಾಷಣ ಮಾಡುವ ಕುರಿತ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಪೀಣ್ಯದಲ್ಲಿ 1. ಕಿ.ಮೀ. ರೋಡ್ ಶೋ ಮಾಡಲು ಸಿದ್ಧತೆ ಮಾಡಲಾಗಿತ್ತಾದರೂ ಎಸ್ಪಿಜಿ ಅನುಮತಿ ನೀಡದ ಹಿನ್ನೆಲೆ ರೋಡ್ ಶೋ ನಿರ್ಧಾರ ಕೈಬಿಡಲಾಗಿದೆ. ತೆರೆದ ವಾಹನದ ಬದಲು ಅಧಿಕೃತ ಕಾರಿನಲ್ಲಿಯೇ ಕಾನ್ವಾಯ್ ಮೂಲಕ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಲೇ ಕಾರಿನೊಳಗಿನಿಂದ ಪ್ರಧಾನಿ ಕಾರ್ಯಕರ್ತರತ್ತ ಕೈ ಬೀಸಲಿದ್ದಾರೆ.
ಮೋದಿ ಸ್ವಾಗತದ ವೇಳೆ ಎಲ್ಲರೂ ರಾಷ್ಟ್ರಧ್ವಜ ಹಿಡಿದುಕೊಳ್ಳಲು, ಪ್ರಧಾನಿ ಮತ್ತು ಇಸ್ರೋ ವಿಜ್ಞಾನಿಗಳಿಗೆ ಮಾತ್ರ ಘೋಷಣೆ ಹಾಕಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ, ಇಲ್ಲಿ ಬಿಜೆಪಿ ಪರ ಘೋಷಣೆ ಹಾಕದಂತೆ ಹಾಗೂ ಬಿಜೆಪಿ ಧ್ವಜ ಪ್ರದರ್ಶಿಸದಂತೆ ನಿರ್ದೇಶನ ನೀಡಿದ್ದು, ಕೇವಲ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





