ಹುಬ್ಬಳ್ಳಿ: ಅದು ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದ ರಸ್ತೆ. ಈ ರಸ್ತೆಯಲ್ಲಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಆದರೆ ಇನ್ನೂ ಕೂಡ ಮರಣ ಮೃದಂಗ ಮಾತ್ರ ನಿಂತಿಲ್ಲ. ಇಂತಹ ಸಮಸ್ಯೆಗೆ ಬ್ರೇಕ್ ಹಾಕಲು ಆರು ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಆ ಕಾಮಗಾರಿ ಜನರಿಗೆ ಅನುಮಾನ ಹುಟ್ಟು ಹಾಕಿದೆ. ಅಷ್ಟಕ್ಕೂ ಏನಿದು ಅನುಮಾನ ಅಂತೀರಾ ತೋರಿಸ್ತಿವಿ ನೋಡಿ..
ಇರುವೆಯಂತೆ ಸಾಗುತ್ತಿರುವ ಹುಬ್ಬಳ್ಳಿ- ಧಾರವಾಡ ನಡುವೆ (ಬೈಪಾಸ್ ರಸ್ತೆಯಲ್ಲಿ) ನಡೆಯುತ್ತಿರುವ ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಿಗದಿತ ಸಮಯಕ್ಕೆ ಮುಗಿಯುವುದೇ? ಈ ಬಾಟಲ್ ನೆಕ್ ಇನ್ನೆಷ್ಟು ಜೀವಗಳನ್ನು ಬಲಿ ಪಡೆದ ನಂತರ ಆರು ಪಥಗಳ ಸೌಭಾಗ್ಯ ಬಳಕೆದಾರರಿಗೆ ದೊರೆಯಲಿದೆ? ಇನ್ನು ಎಂಟು ತಿಂಗಳಿಗೆ ಹಾಲಿ ಬೈಪಾಸ್ನ ಖಾಸಗಿ ಗುತ್ತಿಗೆ ಅವಧಿ ಮುಗಿಯಲಿದ್ದು, ಕೇಂದ್ರ ಸರ್ಕಾರ ಟೋಲ್ (ಸುಂಕ) ವಸೂಲಿಗೆ ಏನು ಆಲೋಚನೆ ಮಾಡಿದೆ? ಇವು ಬಳಕೆದಾರರು ಮತ್ತು ಪ್ರಜ್ಞಾವಂತರಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗಳಾಗಿವೆ.
ಹೌದು..2022ರಲ್ಲಿ ನಾಲ್ಕು ಪಥಗಳ ಸರ್ವೀಸ್ ರಸ್ತೆ ಸೇರಿ, ಬೈಪಾಸ್ನ ಒಟ್ಟು ಹತ್ತು ಪಥಗಳ ನಿರ್ಮಾಣಕ್ಕೆ ಟೆಂಡರ್ ಅಂತಿಮಗೊಂಡಿತ್ತು. ಮೊದಲ ಹಂತವಾಗಿ ಪಥಗಳ ಹೆದ್ದಾರಿ ಪೂರ್ಣಗೊಳಿಸಿಕೊಳ್ಳಲು ನಿರ್ಧರಿಸಿ ಕೆಲಸ ಆರಂಭವಾಗಿತ್ತು. ಈಗಲೂ ಭರದಿಂದ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ಎರಡೂವರೆ ವರ್ಷದ ಗಡುವು ನೀಡಿದೆ. ಆದರೆ ಇನ್ನೂ ಸ್ವಾಧೀನ ಪ್ರಕ್ರಿಯೆಗಳು ಅಂತಿಮಗೊಳ್ಳಬೇಕಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಗಡುವಿನ ಒಳಗೆ ಹೆದ್ದಾರಿ ಪೂರ್ಣಗೊಳ್ಳುವುದು ಅನುಮಾನ ಎಂಬ ಭಾವನೆ ಮೂಡುವಂತಾಗಿದೆ.
ಒಟ್ಟಿನಲ್ಲಿ ಸಾವಿನ ಹೆದ್ದಾರಿಯ ಬಗ್ಗೆ ಕೇಂದ್ರ ಸರ್ಕಾರ ಮುತುವರ್ಜಿಯಿಂದ ಕಾಮಗಾರಿಗೆ ಚುರುಕು ನೀಡುವ ಕಾರ್ಯವನ್ನು ಮಾಡಬೇಕಿದೆ. ಅಲ್ಲದೇ ಆಗುವ ಅಪಘಾತಗಳಿಗೆ ಬ್ರೇಕ್ ಹಾಕಿ ಬಲಿಯಾಗುವ ಜೀವಗಳ ರಕ್ಷಣೆ ಮಾಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





