ಡಾ.ರಾಜಕುಮಾರ್ ಅವರ ಪುತ್ರ ನಟ ರಾಘವೇಂದ್ರ ರಾಜಕುಮಾರ್ ಇಂದು ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಈ ಸುಪ್ರಸಿದ್ಧ ದೇವಸ್ಥಾನಕ್ಕೆ ರಾಜ್ ಕುಟುಂಬ ಆಗಾಗ್ಗೆ ಬರುತ್ತೆ. ಈ ಬಾರಿ ಕುಟುಂಬ ಸಮೇತ ರಾಘವೇಂದ್ರ ರಾಜಕುಮಾರ್ ಆಗಮಿಸಿದ್ದರು.
ಮಾದಪ್ಪನ ಸನ್ನಿಧಿಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್ (Yuvarajkumar), ಪತ್ನಿ ಮಂಗಳಾ ಕೂಡ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಾದಪ್ಪನ ದರ್ಶನ ಪಡೆದರು. ಎಲ್ಲರೂ ಪೂಜೆ ಸಲ್ಲಿಸಿ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿದರು.
ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್ ‘ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ನಾನು ಬಂದಿರಲಿಲ್ಲ. ಪುತ್ರ ಯುವ ರಾಜಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ. ಅದಕ್ಕಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ. ಈ ಜಾಗ ತುಂಬಾ ಚೆನ್ನಾಗಿದೆ. ಮಲೆ ಮಹದೇಶ್ವರ ತಾಣ ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಂದು ಸಲವಾದರೂ ಇಲ್ಲಿಗೆ ಬರಬೇಕು ಅಂತ ಅನ್ನಿಸಿದೆ. ಇನ್ಮೇಲೆ ಮಾದಪ್ಪನ ದರ್ಶನ ಪಡೆಯಲು ಬರ್ತಿನಿ’ ಎಂದರು
bigtvnews | Hubli Dharwad News | Kannada News | Karnataka News Hubli News | News In Hubli | Local news





