ಹಾಸನ: ದೂರದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸುತ್ತಿರುವುದರಿಂದ ಅಲ್ಲಿ ನೆಲೆಸಿರುವ ಜಿಲ್ಲೆಯ ಹತ್ತಾರು ಮಂದಿ ಕನ್ನಡಿಗರು ಆತಂಕಕ್ಕೆ ಒಳಗಾಗಿದ್ದಾರೆ. ಇಸ್ರೇಲ್ನ ವಿವಿಧೆಡೆ ನೆಲೆಸಿರುವ ಹಾಸನ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಚನ್ನರಾಯಪಟ್ಟಣ ತಾಲೂಕಿನ ಡಿಂಕ, ಸಕಲೇಶಪುರ ತಾಲೂಕಿನ ಲಕ್ಕುಂದ, ಅಂಕಿಹಳ್ಳಿ, ಬೆಳಗೊಡು ಗ್ರಾಮದವರು ಎಂದು ತಿಳಿದು ಬಂದಿದೆ.
ಸಕಲೇಶಪುರ ತಾಲೂಕು ಅಂಕಿಹಳ್ಳಿ ಗ್ರಾಮದ ಆಂತೋಣಿ, ಸಕಲೇಶಪುರ ಪಟ್ಟಣದ ನವೀನ್, ಬೇಲೂರು ತಾಲೂಕು ಲಕ್ಕುಂದ ಗ್ರಾಮದ ರೀಮಾ ಪಿಂಟೋ, ಜಾನ್ಪಿಂಟೋ, ವಿನಿತಾ ಪ್ರಿಯಾ ಪಿಂಟೋ, ರೋಷನ್ ಪಿಂಟೋ ಇಸ್ರೇಲ್ನ ತಲವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಜಾನ್ಸನ್, ನವೀನ್, ಡೀನಾ ಡಿಸೋಜಾ, ಎಲಿಜಾ ಪಿಂಟೋ, ಅಂತೋನಿ ಡಿಸೋಜಾ, ಕೃಷ್ಣೇಗೌಡ ಮೊದಲಾದವರು ಇಸ್ರೆಲ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇವರೆಲ್ಲರೂ ನರ್ಸಿಂಗ್ ಹಾಗೂ ವಿವಿಧ ಉದ್ಯೋಗ ಮಾಡುತ್ತಾ ಜೆರುಸಲೇಮ್ ಸೇರಿದಂತೆ ಮೊದಲಾದ ಕಡೆಗಳಲ್ಲಿ ನೆಲೆಸಿದ್ದಾರೆ.
ಈ ಪೈಕಿ ಚನ್ನರಾಯಪಟ್ಟಣ ತಾಲೂಕು ಡಿಂಕ ಗ್ರಾಮದ ಕೃಷ್ಣೇಗೌಡ ಎಂಬುವರು ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಇಸ್ರೇಲ್ನಲ್ಲಿ ನೆಲೆಸಿದ್ದಾರೆ. ಭಾನುವಾರ ತಮ್ಮ ಸಹೋದರ ಮಹದೇವ ಎಂಬುವರ ಜೊತೆ ಕೃಷ್ಣೇಗೌಡ ಫೋನ್ನಲ್ಲಿ ಮಾತನಾಡಿದ್ದಾರೆ. ಸೋಮವಾರ ಸಂದೇಶ ಕಳಿಸಿರುವ ಅವರು, ‘ಇಲ್ಲಿ ಯುದ್ಧ ನಡೆಯುತ್ತಿದೆ, ರಾಕೆಟ್ಗಳ ದಾಳಿ ಕಾಣುತ್ತಿದೆ. ನಾನು ಸುರಕ್ಷಿತವಾಗಿದ್ದೇನೆ, ಒಂದು ವಾರ ಕಾಯುತ್ತೇನೆ’ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





