ಧಾರವಾಡ: ಕೇವಲ 30 ಸಾವಿರ ರೂಪಾಯಿಗಾಗಿ ರಾತ್ರೋರಾತ್ರಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಹಾಗೂ ಹಾರೋಬೆಳವಡಿ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಸುರೇಶ ದೇವರಹೊರು (42) ಎಂಬ ವ್ಯಕ್ತಿಯೇ ಹತ್ಯೆಗೀಡಾದವನು.ಶಿವಪ್ಪ ಬಡಿಗೇರ ಎಂಬಾತನೇ ಹತ್ಯೆ ಮಾಡಿದ ಆರೋಪಿಯಾಗಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ.
ಹತ್ಯೆಗೀಡಾದ ಸುರೇಶ್, ಆರೋಪಿ ಶಿವಪ್ಪನಿಗೆ 60 ಸಾವಿರ ರೂಪಾಯಿ ಸಾಲ ಕೊಟ್ಟಿದ್ದ. ಅದರಲ್ಲಿ 30 ಸಾವಿರ ಹಣವನ್ನು ಶಿವಪ್ಪ ಸುರೇಶನಿಗೆ ವಾಪಸ್ ಕೂಡ ಕೊಟ್ಟಿದ್ದ. ಬಾಕಿ ಇರುವ 30 ಸಾವಿರ ಹಣವನ್ನು ಕೊಡುವಂತೆ ಸುರೇಶ್, ಶಿವಪ್ಪನಿಗೆ ಬೆನ್ನು ಬಿದ್ದಿದ್ದ. ಇದೇ ಕಾರಣ ಇಟ್ಟುಕೊಂಡು ಸುರೇಶ್, ಶಿವಪ್ಪನಿಗೆ ಆಗಾಗ ಬೈಯುತ್ತಿದ್ದ ಎಂಬ ಕಾರಣಕ್ಕೆ ನಿನ್ನೆ ಹಣ ಕೊಡುವ ನೆಪ ಹೇಳಿ ಸುರೇಶನನ್ನು ಹೊರಗಡೆ ಕರೆದುಕೊಂಡು ಬಂದ ಶಿವಪ್ಪ, ಸುರೇಶ್ನನ್ನು ಉಪ್ಪಿನ ಬೆಟಗೇರಿ ಹಾಗೂ ಹಾರೋಬೆಳವಡಿ ರಸ್ತೆಯಲ್ಲಿ ರಾಡ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಇದು ಅಪಘಾತ ಎಂಬಂತೆ ಬಿಂಬಿಸಲು ಶಿವಪ್ಪ ಸುರೇಶನ ಶವದ ಮೇಲೆ ಬೈಕ್ ಅಡ್ಡಲಾಗಿ ಬೀಳಿಸಿ, ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದಾನೆ ಎಂಬಂತೆ ಬಿಂಬಿಸಿದ್ದ. ಸ್ಥಳಕ್ಕೆ ಬಂದ ಪೊಲೀಸರು ಇದು ಅಪಘಾತವಲ್ಲ ಉದ್ದೇಶಿತ ಕೊಲೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಸದ್ಯ ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು, ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





