ಚಿಕ್ಕಮಗಳೂರು ಜಿಲ್ಲೆಯಲ್ಲಿ ಮನನೊಂದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ತಾಯಿ ಟಿವಿ ನೋಡುವುದನ್ನು ಕಡಿಮೆ ಮಾಡುವಂತೆ ಬುದ್ಧಿ ಹೇಳಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಸರಿಕಟ್ಟೆಯಲ್ಲಿ ಈ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಸುಪ್ರಿತಾ (12) ಎಂದು ಗುರುತಿಸಲಾಗಿದೆ. ಬಾಲಕಿ ಸುಪ್ರಿತಾ ಪ್ರತಿದಿನ ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸ ಹೊಂದಿದ್ದಳು. ಘಟನೆ ನಡೆದ ದಿನವೂ ಸಹ ಆಕೆ ಟಿವಿ ನೋಡುತ್ತಾ ಊಟ ಮಾಡುತ್ತಿದ್ದಾಗ, ಆಕಸ್ಮಿಕವಾಗಿ ಆಕೆಯ ಕೈಯಿಂದ ಊಟದ ತಟ್ಟೆ ಕೆಳಗೆ ಬಿದ್ದಿದೆ. ಇದರಿಂದ ಕೋಪಗೊಂಡ ತಾಯಿ, “ಯಾವಾಗಲೂ ಟಿವಿ ನೋಡುತ್ತಿರುತ್ತೀಯಾ, ಟಿವಿ ನೋಡುವುದನ್ನು ಕಡಿಮೆ ಮಾಡು” ಎಂದು ಗದರಿಸಿ ಬುದ್ಧಿ ಹೇಳಿದ್ದಾರೆ. ತಾಯಿಯ ಮಾತಿನಿಂದ ತೀವ್ರವಾಗಿ ನೊಂದ ಸುಪ್ರಿತಾ, ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ವೇಲ್ನಿಂದ (ದುಪ್ಪಟ್ಟಾ) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

