ಯಾವುದೇ ಧರ್ಮವಾದ್ರೂ ಅದರ ಉದ್ದೇಶ ಎಲ್ರ ಒಳೀತು ಬಯಸೋದೇ ಆಗಿರುತ್ತೆ. ಇತರರನ್ನ ದ್ವೇಷಿಸೋದು ಅಸಲಿಗೆ ಅದು ಧರ್ಮ ಅಂತ ಹೇಳೋಕಾಗೋದಿಲ್ಲ. ಹೀಗೆ ಹೇಳೋಕೆ ಕಾರಣವೂ ಇದೆ. ಕೇರಳ-ಕೊಡಗು ಪ್ರಕೃತಿಯ ಮುನಿಸಿಗೆ ತುತ್ತಾಗಿವೆ. ಆದ್ರೇ, ಇದಾದ ಮೇಲೆ ಇಲ್ಲೊಂದಿಷ್ಟು ಮಂದಿ ನೆರೆಯಿಂದ ಬಳಲಿದವರ ಬದುಕು ಹಸನಾಗಲಿ ಅಂತ ಪ್ರಾರ್ಥಿಸ್ತಾನೆ ಇದಾರೆ. ಜತೆಗೆ ನೆರವು ಕೂಡ ನೀಡಿದಾರೆ.
ಅಲ್ಲಾ ಅಲ್ಲಾ ನೀನೇ ಎಲ್ಲ ನಿನ್ನನು ಬಿಟ್ಟು ಗತಿಯಾರಿಲ್ಲ. ಒಳಿತು ಮಾಡೋ ಮನುಜ ನೀನ್ ಇರೋದ್ ಮೂರು ದಿವಸ.. ಹೌದು. ತನಗಾಗಿ, ತಮಗಾಗಿ ಅಲ್ಲದೇ ಸಂಕಷ್ಟದಲ್ಲಿರೋರಿಗಾಗಿ ಪ್ರಾರ್ಥಿಸಿದ್ರೇ ಅದು ಫಲಿಸುತ್ತಂತೆ. ಅದಕ್ಕೇ ಏನೋ ಇವರೆಲ್ಲ ಈಗ ಕೇರಳ-ಕೊಡಗು ನೆರೆಯಿಂದ ದಿಕ್ಕೆಟ್ಟ ಜನರ ಒಳಿತಿಗಾಗಿ, ಅವರು ಬದುಕಿಗಾಗಿ ಇವರೆಲ್ಲ ಪ್ರಾರ್ಥಿಸ್ತಿದಾರೆ. ಪ್ರಕೃತಿಯ ಮುಂದೆ ಮನುಷ್ಯನೆಂಬ ಪ್ರಾಣಿ ಬಲು ಕುಬ್ಜ. ತಾನೇ ಎಷ್ಟೇ ದೊಡ್ಡವನು ಅಂತ ಎದೆಯುಬ್ಬಿಸ್ಕೊಂಡಿದ್ರೂ ಪ್ರಕೃತಿ ತಾನೇನು ಅಂತ ಈಗಾಗಲೇ ಕೇರಳ-ಕೊಡಗಿನಲ್ಲಿ ತೋರಿಸಿಯಾಗಿದೆ. ಬಿಡಿ ಅದನ್ನ ತಡೆಯೋಕಾಗುತ್ತಾ.. ಆದ್ರೇ, ಅದು ಮತ್ತೆ ಆಗದಿರಲಿ ದೇವ್ರೇ ಅಂತ ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ಈಗಲೂ ನಡೀತಿದೆ. ಇಲ್ಲಿನ ಐಲೆಸುನತ್ ವಾಲಾ ಜಮಾತ್, ಮುತುವಲ್ಲಿ ಮಹ್ಮದ್ ರಫಿ ಸಾವಂತನವರ ನೇತೃತ್ವದಲ್ಲಿ ಪ್ರತಿ ಶುಕ್ರವಾರ ನಮಾಜ್ ನಡೆಯುತ್ತೆ. ಹಾಗೇ ಪ್ರತಿ ವಾರವೂ ಕೇರಳ-ಕೊಡಗು ಮತ್ತೆ ಮೊದಲಿನಂತಾಗಲಿ ಅಂತ ಆ ಅಲ್ಲಾಹುನಲ್ಲಿ ಇವರೆಲ್ಲ ಪ್ರಾರ್ಥನೆ ಸಲ್ಲಿಸ್ತಿದಾರೆ. ಅಷ್ಟೇ ಅಲ್ಲ, ಪ್ರತಿ ವಾರವೂ ತಮ್ ತಮ್ ಕೈಲಾದಷ್ಟು ಹಣವನ್ನ ಪರಿಹಾರ ನಿಧಿಯಂತ ಸಂಗ್ರಹಿಸಿದಾರೆ. ಮೊನ್ನೆ ಬಕ್ರೀದ್ ಹಬ್ಬದಲ್ಲೂ ಕೂಡ ಎಲ್ರೂ ಸೇರಿ ಆ ಒಂದೇ ದಿನ 13 ಸಾವಿರ ರೂ. ಸಂಗ್ರಹಿಸಿದಾರೆ. ಜತೆಗೆ ಗಾಮನಗಟ್ಟಿ ಗೆಳೆಯರ ಬಳಗವೂ ಇದಕ್ಕೆ ಸಾಥ್ ನೀಡಿದೆ. ಎಲ್ಲವೂ ಸೇರಿ 35 ಸಾವಿರ ರೂ. ಸಂಗ್ರಹಿಸಿ ಸಿಎಂ ಪರಿಹಾರ ನಿಧಿಗೆ ಕೊಟ್ಟಿದಾರೆ.
ಮೊಹ್ಮದ್ ಅಲಿ, ಸಮುದಾಯದ ಮುಖಂಡ
ಇಲ್ಲಿರೋ ಸಾಕಷ್ಟು ಯುವಕರು ಕೇರಳ-ಕೊಡಗು ಪ್ರವಾಹದಿಂದ ತತ್ತರಿಸಿದ್ಮೇಲೆ ನೆಲೆ ಕಳ್ಕೊಂಡವರಿಗಾಗಿ ಆಹಾರ, ಬಟ್ಟೆ ಸೇರಿದಂತೆ ನಿತ್ಯ ಉಪಯೋಗಕ್ಕಾಗುವ ವಸ್ತುಗಳನ್ನ ಸಂಗ್ರಹಿಸಿ ಕಳುಹಿಸಿಕೊಟ್ಟಿದಾರೆ. ಇದರ ಜತೆಗೆ ಇನ್ನೂಂದಿಷ್ಟು ನೆರವಾಗ್ಬೇಕು ಅಂದ್ಕೊಂಡು ಇದೇ ಮಸೀದಿಯಲ್ಲಿರೋ ಹಿರಿಯರ ಗಮನಕ್ಕೂ ತಂದಿದಾರೆ. ಅಂದಿನಿಂದ ಪ್ರತಿ ಶುಕ್ರವಾರ ಸಂತ್ರಸ್ತರಿಗಾಗಿ ಪ್ರಾರ್ಥನೆ ನಡೆಸ್ತಿದಾರೆ. ಪ್ರಕೃತಿ ವೈಪರೀತ್ಯದಲ್ಲಿ ನಲುಗಿದವರ ಇಂಥವರೇ ಅಂಥ ಏನಿಲ್ಲ. ಹೀಗೆ ಮನುಷ್ಯ ಸಂಕಷ್ಟಕ್ಕೆ ಸಿಲುಕಿದಾಗ, ತನ್ನ ನೆಲೆಯನ್ನ ಕಳ್ಕೊಂಡಾಗ ಎಂಥವರ ಹೃದಯವೂ ಕರಗುತ್ತೆ. ಕೇರಳ-ಕೊಡಗು ಮತ್ತೆ ಅಭಿವೃದ್ಧಿ ಹೊಂದುವವರೆಗೂ ಪ್ರತಿ ವಾರವೂ ಪ್ರೇಯರ್ ಮಾಡಲಿದಾರೆ. ಈಗ ಸಂಗ್ರಹಿಸಿರೋ 35 ಸಾವಿರ ರೂಪಾಯ ಡಿಡಿಯನ್ನ ಹುಬ್ಬಳ್ಳಿಯ ತಹಶೀಲ್ದಾರ್ ಶಶಿಧರ್ ಮಾಡ್ಯಾಳ ಮೂಲಕ ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಹಸ್ತಾಂತರಿಸಿದಾರೆ.
ಅಬ್ದುಲ್ ಸಾವಂತನವರ, ಅಧ್ಯಕ್ಷ, ಎನ್ಎಸ್ ಯುಐ
ಒಳೀತು ಎಲ್ರಲ್ಲೂ ಇದೆ, ಎಲ್ಲ ಧರ್ಮಗಳಲ್ಲೂ ಇದೆ. ಮನುಷ್ಯ ಮನುಷ್ಯವನ್ನ ಮರೆಯಬಾರದು. ಮೊದಲು ಮನುಷ್ಯನಿಗೆ ಬೇಕಿರೋದು ಮನುಷ್ಯತ್ವ ಅದು ಇದ್ರೇ ಮುಗೀತು. ಧರ್ಮ-ಜಾತಿ ಇನ್ನೊಂದು ಮತ್ತೊಂದು ಆಮೇಲೆ. ಮನುಷ್ಯರೇ ಮನುಷ್ಯರಿಗಾಗದಿದ್ರೇ ಹೇಗೆ ಹೇಳಿ.. ಸಂಕಷ್ಟದಲ್ಲಿರೋರಿಗಾಗಿ ಇವರು ಪ್ರಾರ್ಥನೆ ಮಾಡ್ತಿದಾರೆ. ಕೈಲಾದಷ್ಟು ಸಹಾಯ ಮಾಡಿದಾರೆ. ದ್ವೇಷ ಅಳಿಯಲಿ, ಮನುಷ್ಯತ್ವ ಉಳಿಿಯಲಿ. ಇವರ ಪ್ರಾರ್ಥನೆ ಫಲಿಸಲಿ, ಕೊಡಗು-ಕೇರಳ ಮತ್ತೆ ತಲೆ ಎತ್ತಿ ನಿಲ್ಲಲಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





