ಮೈಸೂರು: ಟಿಪ್ಪು ಜಯಂತಿಯನ್ನ ಆಚರಣೆ ಮಾಡದಿರಲು ಈ ಹಿಂದೆ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೆ. ಆದ್ರೆ ಅವರು ಟಿಪ್ಪು ಜಯಂತಿಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಆಚರಣೆ ಮಾಡಿ ಅಧಿಕಾರ ಕಳೆದುಕೊಂಡರು. ಈಗಲೂ ಕಾಲ ಮಿಂಚಿಲ್ಲ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಎಚ್ಚೆತ್ತುಕೊಂಡು ಆಚರಣೆ ನಿಲ್ಲಿಸುತ್ತಾರೆ ಅಂತ ಅಂದ್ಕೊಂಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ನನ್ನ ಹೆಸರು ಹಾಕದಂತೆ ಮೈಸೂರು ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಆದ್ರೆ ಅವರು ಪ್ರೋಟೋಕಾಲ್ ಹಾಕಲೇ ಬೇಕು ಎಂದು ತಿಳಿಸಿದ್ದಾರೆ. ನಾನು ಹಾಕಬಾರದು ಅಂತ ಅಧಿಕೃತವಾಗಿ ಪತ್ರ ಕೊಡಬೇಕಾಗುತ್ತೆ. ನಾನು ನಮ್ಮ ಕಚೇರಿಯಿಂದ ಅಧಿಕೃತವಾಗಿ ಪತ್ರ ಬರೆಯಲಿದ್ದೇನೆ. ಒಂದು ವೇಳೆ ನನ್ನ ಹೆಸರು ಹಾಕಿದರೆ ನಾನು ಕಾರ್ಯಕ್ರಮಕ್ಕೆ ಹೋಗ್ತೀನಿ. ಆದ್ರೆ ಕಾರ್ಯಕ್ರಮದಲ್ಲಿ ನಾನು ನಿಜವಾದ ಟಿಪ್ಪು ಚರಿತ್ರೆಯನ್ನ ಹೇಳಬೇಕಾಗುತ್ತೆ. ಅಲ್ಪಸಂಖ್ಯಾತರ ಜಯಂತಿ ಮಾಡುವುದಾದರೆ ಈ ದೇಶಕ್ಕೆ ಕೊಡುಗೆ ಕೊಟ್ಟ ಮಹಾನ್ ವ್ಯಕ್ತಿಗಳಿದ್ದಾರೆ ಅವರ ಜಯಂತಿ ಮಾಡಿ. ಮಾಜಿ ರಾಷ್ಟ್ರಪತಿ ದಿ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜಯಂತಿ ಮಾಡಿ. ಮೈಸೂರು ಭಾಗದ ಡಾ. ಅಬ್ದುಲ್ ನಜೀರ್ ಸಾಬ್ ಅವರ ಜಯಂತಿ ಮಾಡಿ ಎಂದು ಅವರು ಟಿಪ್ಪು ಜಯಂತಿ ಆಚರಣೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದರು.ಇನ್ನು ಟಿಪ್ಪು ಸುಲ್ತಾನ್ ಕೊಡುಗೆ ಕರ್ನಾಟಕಕ್ಕೆ ಏನು..? ನಾಲ್ಕು ವಿಷಯ ಹೇಳಿ ಸಾಕು. ನಾಡಿನ ನೆಲ, ಜಲಕ್ಕೆ ಹೋರಾಟ ಮಾಡಿದ ಮೈಸೂರು ಮಹಾರಾಜರನ್ನ ಮರೆತಿದ್ದಾರೆ. ಸಿದ್ದರಾಮಯ್ಯ ಅವ್ರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮಾಡಬಹುದಿತ್ತು. ಇನ್ನು ಸಚಿವೆ ಜಯಮಾಲ ಅವರು ಚೆನ್ನಾಗಿ ಆ್ಯಕ್ಟಿಂಗ್ ಮಾಡ್ತಾರೆ. ಸ್ಕ್ರಿಪ್ಟ್ ಬರೆದಿರೋದನ್ನ ಚೆನ್ನಾಗಿ ಓದುತ್ತಾರೆ. ಈಗ ದೀಪಾವಳಿ ಹಬ್ಬ ಬರುತ್ತಿದೆ. ಟಿಪ್ಪು ಸುಲ್ತಾನ್ ಮೇಲುಕೋಟೆ ಅಯ್ಯಂಗಾರ್ ಅವರನ್ನು 200 ವರ್ಷಗಳ ಹಿಂದೆ ಟಿಪ್ಪು ಕಗ್ಗೊಲೆ ಮಾಡಿದ್ದ. ಅಲ್ಲದೇ ಇದೀಗ ನವೆಂಬರ್ ತಿಂಗಳು, ಕನ್ನಡ ರಾಜ್ಯೋತ್ಸವ ಮಾಡ್ತಿದ್ದಾರೆ. ಟಿಪ್ಪು ಕನ್ನಡ ಭಾಷೆಯನ್ನು ಬಿಟ್ಟು ಪರ್ಷಿಯನ್ ಭಾಷೆಯನ್ನ ಜಾರಿಗೆ ತಂದಿದ್ದ. ನಗರದ ಹಲವು ನಗರಗಳಿಗೆ ಪರ್ಷಿಯನ್ ಹೆಸರುಗಳನ್ನು ಇಟ್ಟಿದ್ದ. ಪ್ರತೀ ವರ್ಷ ಕದ್ದು ಮುಚ್ಚಿ ಜಯಂತಿ ಆಚರಣೆ ಮಾಡ್ತಿದ್ದಾರೆ. ಕದ್ದು ಮುಚ್ಚಿ ಆಚರಣೆ ಮಾಡೋದು ನೋಡಿದ್ರೆ ಗೊತ್ತಾಗುತ್ತೆ ಟಿಪ್ಪು ಚರಿತ್ರೆ ಎಂಥದ್ದು ಅಂತ. ನಾವು ಪ್ರತೀ ವರ್ಷ ಟಿಪ್ಪು ಜಯಂತಿಯನ್ನ ವಿರೋಧ ಮಾಡಿಕೊಂಡೇ ಬಂದಿದ್ದೇವೆ. ಈ ವರ್ಷ ಸಹ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ನಾವು ಪ್ರತಿಭಟನೆ ಮಾಡ್ತೀವಿ. ಕೊಡಗಿನಲ್ಲಂತೂ ಪ್ರತಿಭಟನೆ ಮಾಡೇ ಮಾಡ್ತೀವಿ ಎಂದು ಸಂಸದ ಪ್ರತಾಪ್ ಸಿಂಹ ಟಿಪ್ಪು ಜಯಂತಿ ಆಚರಣೆಗೆ ತಮ್ಮ ವಿರೋಧ ಇರುವುದನ್ನು ಸ್ಪಷ್ಟಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





