ಹುಬ್ಬಳ್ಳಿ: ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೇವೆ. ಇದೇ ತಿಂಗಳಿನಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. 2ಎ ಹಾಗೂ 2ಡಿ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸರ್ಕಾರಕ್ಕೂ ನಾವು ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಪರಿಶೀಲನೆ ಮಾಡುವುದಾಗಿ ಸಿಎಂ ಹೇಳಿದ್ದರು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ವಿಚಾರದಲ್ಲಿ ಸಮುದಾಯದಲ್ಲಿ ನಿರಾಸೆ ಮೂಡಿದೆ. ಕೂಡಲೇ ತಜ್ಞರ ಸಭೆ ಕರೆದು ಮೀಸಲಾತಿ ವಿಚಾರ ಇತ್ಯರ್ಥ ಮಾಡಬೇಕು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ. ಸಮುದಾಯದ ಜನತೆ ಮತ್ತೆ ಹೋರಾಟಕ್ಕೆ ಅಣಿಯಾಗಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಮೀಸಲಾತಿ ವಿಚಾರದಲ್ಲಿ ನಮಗೆ ಇನ್ನೂ ಆದೇಶ ಪ್ರತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದಲ್ಲಿ ಮತ್ತೆ ಹೋರಾಟ ನಡೆಸಲು ರೂಪುರೇಷೆ ಆರಂಭಿಸಿದ್ದೇವೆ ಎಂದರು.
2ಎ ಮೀಸಲಾತಿ ಹೈಕೋರ್ಟ್ನಲ್ಲಿದೆ, 2ಡಿ ಸುಪ್ರೀಂಕೋರ್ಟ್ ನಲ್ಲಿದೆ. ಈ ಎಲ್ಲವನ್ನೂ ಬಗೆಹರಿಸುವ ಶಕ್ತಿ ಸರ್ಕಾರಕ್ಕಿದೆ. ಆದ್ದರಿಂದ ಸರ್ಕಾರ ಮನಸ್ಸು ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು. ಒಂದು ವೇಳೆ 2ಎ ಮೀಸಲಾತಿ ನೀಡದೆ ಹೋದ್ರೂ, ಸೆಂಟ್ರಲ್ ಮತ್ತು ಸ್ಟೇಟ್ ಓಬಿಸಿಯಲ್ಲಿ ಲಿಂಗಾಯತ ಸಮುದಾಯವನ್ನ ಸೇರಿಸಿ. ಪಂಚಮಸಾಲಿ ಸಮುದಾಯದ ಶಕ್ತಿ ಈಗಾಗಲೇ ನಿಮಗೆ ತಿಳಿದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಪಕ್ಷಕ್ಕೆ ಬೆಂಬಲ ನೀಡಿದೆ. ಆದ್ದರಿಂದ ಇದರ ಋಣವನ್ನ ತೀರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ನಮ್ಮ ಸಮುದಾಯಕ್ಕೆ ಲೋಕಸಭಾ ಚುನಾವಣೆಯ ಮುನ್ನವೇ ಮೀಸಲಾತಿ ಘೋಷಣೆ ಮಾಡಿ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಡ ಹಾಕಿದ್ದಾರೆ.
ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್ ಸಚಿವ ಸ್ಥಾನಕ್ಕೆ ಒತ್ತಡ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪಂಚಮಸಾಲಿ ಸಮುದಾಯದ 12 ಜನ ಶಾಸಕರಿದ್ದಾರೆ. 12 ರಲ್ಲಿ 5-6 ಜನರಿಗೆ ಸಚಿವ ಸ್ಥಾನ ನೀಡಬೇಕೆಂದು ನಾವು ಮನವಿ ಮಾಡಿದ್ದೇವು. ಆದ್ರೆ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಶಿವಾನಂದ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿದೆ. ಮುಂದೆ ಆದ್ರೂ ಲಿಂಗಾಯತ ಪಂಚಮಸಾಲಿ ಹೋರಾಟದ ನೇತೃತ್ವ ವಹಿಸಿದ ವಿನಯ್ ಕುಲಕರ್ಣಿಗೆ ಮತ್ತು ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಸ್ವಾಮೀಜಿ ಒತ್ತಡ ಹಾಕಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





