ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘ (ರಿ) ದ ಮೊದಲ ಶೈಕ್ಷಣಿಕ ಸಮಾವೇಶ -2023 ಇದೇ ಅಗಸ್ಟ್ 27 ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಅಕ್ಷಯ ಪಾರ್ಕ್’ನ ಶ್ರೀ ಮಹಾದೇವ ಸ್ವಾದಿ ವಿದ್ಯಾಸಂಸ್ಥೆ (ರಿ) ಯಲ್ಲಿ ನಡೆಯಲಿದೆ. ಮೋಚಿಗಾರ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೂಳಿದ ಸಮಾಜವಾಗಿದ್ದು, ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತ, ಸರ್ಕಾರದ ಸವಲತ್ತುಗಳಿಂದ ಜನರು ವಂಚಿತಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸುವ ಜತೆಗೆ ಸಮಾಜದ ಅಭಿವೃದ್ಧಿ ಉದ್ದೇಶಕ್ಕಾಗಿ 2020 ರಲ್ಲಿ ಸ್ಥಾಪಿತಗೊಂಡ ಧಾರವಾಡ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘ (ರಿ) ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಇದೀಗ ಸಮಾಜದ ಮಕ್ಕಳು ಶಿಕ್ಷಣವಂತರಾಗಬೇಕೆಂಬ ಉದ್ದೇಶದಿಂದ ಮೊದಲ ಶೈಕ್ಷಣಿಕ ಸಮಾವೇಶ – 2023 ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ 2022-23 ರಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ, ನಿವೃತ್ತ ನೌಕರರಿಗೆ ಗೌರವ ಸನ್ಮಾನಿಸಲಾಗುವುದು.

ಸಮಾವೇಶವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ವಿಪ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ, ಎನ್.ಎಚ್.ಕೊನರೆಡ್ಡಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಿದ್ದಪ್ಪ ಕಮ್ಮಾರ, ಗೌರವ ಅಧ್ಯಕ್ಷತೆಯನ್ನು ಉದ್ದಿಮೆ ಮಹಾದೇವಪ್ಪ ಸ್ವಾದಿ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಪಾಲ್ಗೊಳ್ಳಲಿದ್ದಾರೆ.
ವಿಶೇಷ ಉಪನ್ಯಾಸವನ್ನು ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಸುಶಿಲಕುಮಾರ ರೋಣದ ನೀಡಲಿದ್ದು, ಸಮಾಜದ ಎಲ್ಲ ಗುರು-ಹಿರಿಯರು, ಬಂಧುಗಳು ಮತ್ತು ಆಪ್ತ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಧಾರವಾಡ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘ (ರಿ) ಅಧ್ಯಕ್ಷ ಸಿದ್ದಪ್ಪ ಕಮ್ಮಾರ, ಗೌರವ ಅಧ್ಯಕ್ಷ ಮಹಾದೇವಪ್ಪ ಸ್ವಾದಿ, ಕಾರ್ಯದರ್ಶಿ ಪರಶುರಾಮ ದಾಗಿನದಾರ, ಸಹ ಕಾರ್ಯದರ್ಶಿ ಜಯಶ್ರೀ ಮಂಗಳೂರು, ಚಂದ್ರಕಾಂತ ಗೌಡರ, ಮಂಜುನಾಥ ಗೌಡರ, ನಾರಾಯಣ ಕಲಘಟಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





