ಹುಬ್ಬಳ್ಳಿ: ಅವರೆಲ್ಲರೂ ಹೊಲದಲ್ಲಿ ಬೆವರು ಹರಿಸಿ ದೇಶಕ್ಕ ಅನ್ನ ಹಾಕುವ ಅನ್ನದಾತ. ಆದರೆ ಅನ್ನದಾತ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾನೆ. ಹೆಸ್ಕಾಂ ಕಚೇರಿಯ ಮುಂದೆಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಯಿಂದ ಒಂದು ಕಡೆಗೆ ಖುಷಿಯ ಕ್ಷಣಗಳನ್ನು ಮೆಲುಕು ಹಾಕುವಷ್ಟರಲ್ಲಿಯೇ ಅನ್ನದಾತನಿಗೆ ಸಂಕಷ್ಟ ಎದುರಾಗಿದೆ. ಒಂದು ಕಡೆ ಕೈಕೊಟ್ಟ ಮಳೆ, ಇನ್ನೊಂದೆಡೆ ಬರಗಾಲದ ಛಾಯೆ. ಇನ್ನೂ ಅಲ್ಪ ಸ್ವಲ್ಪ ಇರುವ ನೀರಾವರಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗದೆ ರೈತರು ಬೆಳೆದ ಬೆಳೆ ಹಾಳಾಗುತ್ತಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ಏಳು ಜಿಲ್ಲೆಯ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಸರಬರಾಜು ಕಂಪನಿ ಸರಿಯಾಗಿ ವಿದ್ಯುತ್ ಪೂರೈಸದ ಕಾರಣ ಬೆಳೆಗಳು ನಾಶವಾಗುವ ಆತಂಕದಲ್ಲಿದ್ದಾರೆ.
ಇನ್ನೂ ಸರ್ಕಾರದ ಆದೇಶದ ಪ್ರಕಾರ ಪ್ರತಿದಿನ ಏಳು ಗಂಟೆ 3 ಫೆಸ್ನಂತೆ ನಿರಂತರ ವಿದ್ಯುತ್ ಪೂರೈಸಬೇಕು ಎಂಬ ಆದೇಶವಿದೆ. ಆದರೆ, ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನೀರಾವರಿ ಬೆಳೆಗಳಾದ ಗೋವಿನ ಜೋಳ, ಹೆಸರು, ಸೋಯಾಬಿನ್, ಶೇಂಗಾ, ಕಬ್ಬು ಹಾಗೂ ಹತ್ತಿ ಬೆಳೆಯನ್ನು ರೈತರು ಬೆಳೆದಿದ್ದಾರೆ.
ಮಳೆ ಕೈಕೊಟ್ಟು ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆಯಿಂದಾಗಿ ಕೃಷಿಕರು ಜಮೀನುಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಒದಗಿಸಲಾಗದೆ ಬೆಳೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳ ಮೂಲಕ ನೀರು ಪಡೆದು, ಕೃಷಿ ಚಟುವಟಿಕೆಯಲ್ಲಿ ತೊಡಗಲು ಮುಂದಾದ ರೈತರಿಗೆ ಅನಿಯಮಿತ ವಿದ್ಯುತ್ ಕಡಿತ ಬೆಂಬಿಡದೇ ಕಾಡುತ್ತಿದೆ. ಆದರೆ, ವಿದ್ಯುತ್ ಸರಬರಾಜು ಕಂಪನಿ ಪೂರಕವಾಗಿ ವಿದ್ಯುತ್ ಸರಬರಾಜು ಮಾಡದೆ ಲೋಡ್ ಶೆಡ್ಡಿಂಗ್ ಹಾಗೂ ಇನ್ನಿತರ ಕಾರಣ ನೀಡುತ್ತಿದ್ದಾರೆ ಎಂದು ರೈತರು ನೋವು ತೋಡಿಕೊಂಡಿದ್ದು, ಹುಬ್ಬಳ್ಳಿಯ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





