ಕಲಬುರ್ಗಿ: ಸಚಿವ ಡಿ.ಕೆ.ಶಿವಕುಮಾರ್ಗೆ ಅವನತಿ ಕಾಲ ಬಂದಿದೆ. ಡಿ.ಕೆ ಶಿವಕುಮಾರ್ಗೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿಕೆ ಶಿವಕುಮಾರ್ ನಿನ್ನೆ ಕ್ಷಮೆಯಾಚಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯಲ್ಲಿ ಮಾತನಾಡಿರುವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಸಚಿವ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದಲ್ಲಿ ಎಷ್ಟು ಕಾಂಗ್ರೆಸ್ಗೆ ವೋಟ್ ತಂದಿದ್ದಾರೆ ಎಂಬುದನ್ನ ತಿಳಿದುಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ 60 ಲಿಂಗಾಯತ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ವೈದಿಕ ಸ್ವಾಮೀಜಿಗಳ ಒತ್ತಡಕ್ಕೆ ಡಿಕೆ ಶಿವಕುಮಾರ್ ಹೀಗೆ ಮಾತನಾಡುತ್ತಾನೆಂದರೆ ಅದು ಅವರ ಅವಿವೇಕಿತನ. ಹಾಗಾಗಿ ಸಚಿವ ಡಿಕೆ ಶಿವಕುಮಾರ್ಗೆ ಅವನತಿ ಕಾಲ ಬಂದಿದೆ ಎಂದು ಮಹಾಂತ ಶಿವಾಚಾರ್ಯ ಸ್ವಾಮೀಜಿ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸಚಿವ ಡಿ.ಕೆ.ಶಿವಕುಮಾರ್ ಅನಂತ ಹಗರಣಗಳಲ್ಲಿ ಇದ್ದಾನೆ, ತನ್ನ ಹಗರಣಗಳನ್ನ ತಾನು ಮುಗಿಸಿಕೊಳ್ಳಬೇಕು ಹೊರತಾಗಿ, ಮತ್ತೊಬ್ಬರ ವಿಚಾರದಲ್ಲಿ ಕೈ ಹಾಕುವುದು ಅವಶ್ಯಕತೆ ಇಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು, ಲಿಂಗಾಯತ ಧರ್ಮದ ವಿಚಾರದಲ್ಲಿ ಕೈ ಹಾಕಬಾರದು. ಸಿಎಂ ಆಗಬೇಕೆಂಬ ದುರಾಸೆಯಿಂದ ಸ್ವಾಮೀಜಿಯೊಬ್ಬರನ್ನ ಒಲಿಸಿಕೊಳ್ಳಬೇಕೆಂದು ಹೇಳಿಕೆ ಕೊಟ್ಟಿದ್ದಾನೆ. ಸಚಿವ ಡಿ.ಕೆ ಶಿವಕುಮಾರ್ ಈ ರೀತಿ ಹೇಳಿಕೆ ನೀಡಿದ್ರೆ, ಉತ್ತರ ಕರ್ನಾಟಕಕ್ಕೆ ಬರದಂತೆ ಬಹಿಷ್ಕಾರ ಹಾಕಬೇಕಾಗುತ್ತೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಅಪರಾಧ ಆಗಿದ್ರೆ ಕ್ಯಾಬಿನೆಟ್ನಲ್ಲಿ ಸಹಿ ಯಾಕೆ ಮಾಡಿದ? ಕ್ಯಾಬಿನೆಟ್ನಲ್ಲಿ ಸಹಿ ಮಾಡಬೇಕಾದ್ರೆ ಡಿಕೆ ಶಿವಕುಮಾರ್ ಮಲಗಿ ಕೊಂಡಿದ್ದ ಏನು?. ಸಚಿವ ಡಿಕೆ ಶಿವಕುಮಾರ್ಗೆ ಬುದ್ಧಿಭ್ರಮೆಯಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾನೆ ಎಂದು ಶಿವಾಚಾರ್ಯ ಸ್ವಾಮಿಜಿ ಕಿಡಿಕಾರಿದ್ದಾರೆ.ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಸುಪ್ರೀಂಕೋರ್ಟ್ ಹೋಗಿಯಾದರೂ ಪ್ರತ್ಯೇಕ ಲಿಂಗಾಯತ ಧರ್ಮ ಪಡಿಯುತ್ತೇವೆ. ಯಾವ ಸರ್ಕಾರದ ಮೇಲೆ ನಾವು ಅವಲಂಬಿತರಾಗಿಲ್ಲ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಆಗಲಿ ಯಾರ ಮೇಲೂ ನಾವು ಅವಲಂಬಿತರಾಗಿಲ್ಲ. ಹಾಗಾಗಿ ಲಿಂಗಾಯತ ಧರ್ಮಕ್ಕೆ 900 ವರ್ಷಗಳ ಇತಿಹಾಸವಿದೆ, ನಮ್ಮ ಹೋರಾಟ ಮುಂದುವರೆಯುತ್ತೆ. ಒಂದು ವೇಳೆ ಮುಂದೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾದ್ರೆ.ಅವರೇ ನಮ್ಮ ಲಿಂಗಾಯತ ಪ್ರತ್ಯೇಕ ಧರ್ಮ ಕೊಡ್ತಾರೆ. ವೈದಿಕ ಸ್ವಾಮೀಜಿಗಳ ಒತ್ತಡದಿಂದ ಡಿಕೆ ಶಿವಕುಮಾರ್ ಮಾತನಾಡಿದ್ದು, ಈ ಬಗ್ಗೆ ಅವರು ಕ್ಷಮೆ ಕೇಳಬೇಕೆಂದು ಶ್ರೀಶೈಲ ಸಾರಂಗಧರ ದೇಶೀಕೇಂದ್ರ ಜಗದ್ಗುರು ಮಹಾಂತ ಶಿವಾಚಾರ್ಯ ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





