ಧಾರವಾಡ: ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ಆದರೆ, ವೃತಿ ಮಾಡಿದ ಸ್ಥಳದಲ್ಲಿ ನಮ್ಮ ಸೇವೆಯಿಂದ ಜನ ಸಂತೃಪ್ತರಾಗಿದ್ದರೆ ಅದುವೇ ನಮಗೆ ಸಿಗುವ ದೊಡ್ಡ ಸನ್ಮಾನ, ಸಾರ್ವಜನಿಕರ ಸೇವೆಗೆ ಸದಾ ನಮ್ಮ ಮನ ಮಿಡಿಯಬೇಕು ಎಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ನಿರ್ಗಮಿತ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳು ಆಯೋಜಿಸಿದ್ದ, ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಸೇವೆಗೆ ನೇಮಕವಾಗುವ ಅಧಿಕಾರಿ, ಸಿಬ್ಬಂದಿ ಕ್ಷೇತ್ರ ಮಟ್ಟದಲ್ಲಿ ಸಿಗುವ ಅನುಭವದ ಪಾಠಗಳನ್ನು ಮನನ ಮಾಡಿಕೊಳ್ಳಬೇಕು. ನಾನು ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಜನ ಸಾಮಾನ್ಯರೊಂದಿಗೆ ಹೊಂದಿದ್ದ ಸಂಪರ್ಕ, ಒಡನಾಟದ ಅನುಭವ ಅಪರ ಜಿಲ್ಲಾಧಿಕಾರಿ ಹುದ್ದೆಯನ್ನು ಸಮರ್ಥವಾಗಿ ಮತ್ತು ಸಂತೃಪ್ತಿಯಿಂದ ನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯ ಜನರು ಸಹೃದಯರು, ಅಭಿವೃದ್ಧಿ ಪ್ರೀಯರು ಮತ್ತು ಜನರಿಗಾಗಿ ದುಡಿಯುವ ಅಧಿಕಾರಿಗಳ ಅಭಿಮಾನಿಗಳು. ಇಲ್ಲಿನ ಸೇವೆ ನನಗೆ ತೃಪ್ತಿ ತಂದಿದೆ. ಸಿಬ್ಬಂಧಿಗಳ, ಅಧಿಕಾರಿಗಳ ಸಹಕಾರ ಮತ್ತು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅತ್ಯುತ್ತಮ ಸ್ಥಾನ ಗಳಿಸುವ ಮೂಲಕ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದ್ದು, ನನಗೆ ಹೆಮ್ಮೆ ತರಿಸಿದೆ ಎಂದು ಅವರು ಹೇಳಿದರು. ಮತ್ತು ಅವಕಾಶ ಸಿಕ್ಕರೆ ಮತ್ತೊಂದು ಅವಧಿಗೆ ಜಿಲ್ಲೆಯ ಸೇವೆ ಮಾಡಲು ಸಿದ್ಧನಿದ್ದೆನೆ ಎಂದು ಅವರು ಸಂತೋಷದಿಂದ ನುಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





