ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಂಚಲನ ಮೂಡಿಸಿದ ಘಟನೆಯೆಂದರೆ ದಸರಾ ಆನೆ ಅರ್ಜುನನ ಸಾವು. ನಾಡಹಬ್ಬ ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಬಲಿಷ್ಠ ಆನೆ ಅರ್ಜುನ ಕಾಡಾನೆ ಒಂಟಿ ಸಲಗನ ದಾಳಿಯಿಂದ ಅರಣ್ಯ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರ ಕಣ್ಣೇದುರೇ ಸಾವನ್ನಪ್ಪಿತ್ತು.
ಅರ್ಜುನನ ಸಾವು ಅನ್ಯಾಯದ ಸಾವು ಈ ಬಗ್ಗೆ ತನಿಖೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಲೇ ಇದೆ. ಬಲಿಷ್ಠನಾಗಿದ್ದ ಅರ್ಜುನ ಕಾಡಾನೆ ದಾಳಿಗೆ ಸಾವನ್ನಪ್ಪಿದ್ದಾನೆ ಎನ್ನುವುದು ನಂಬಲಾಗದ ಸತ್ಯವೆಂದು ಕೆಲವರು ವಾದಿಸಿದರೆ, ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವಿದ್ದು, ಅರ್ಜುನನ ಕಾಲಿಗೆ ಗುಂಡೇಟು ಬಿದ್ದ ಕಾರಣವೇ ಆನೆ ಸಾವಿಗೆ ಕಾರಣ ಎಂದು ಕೆಲವರು ನೇರವಾಗಿ ಆರೋಪಿಸುತ್ತಿದ್ದಾರೆ. ಯಾವುದು ಸತ್ಯ ಯಾವುದು ಸುಳ್ಳು ತನಿಖೆಯಿಂದ ಹೊರ ಬರಬೇಕಿದೆ.
ನಮ್ಮ ಕರ್ನಾಟಕದಲ್ಲಿ ನಾಡಹಬ್ಬ ದಸರಾಕ್ಕೆ ಇರುವ ಗೌರವವೇ ದಸರಾ ಅಂಬಾರಿ ಹೊರುವ ಆನೆಗಳ ಮೇಲೂ ಇದೆ. ಅವುಗಳನ್ನು ಪೂಜ್ಯನೀಯವಾಗಿಯೂ ನೋಡಲಾಗುತ್ತದೆ. ಆದರೆ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ್ದ ಆನೆಗಳು ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಿವೆ. ಅರ್ಜುನನ ಸಾವು ಮೊದಲಲ್ಲ ಈ ಹಿಂದೆಯೂ ದ್ರೋಣ ಹಾಗೂ ಬಲರಾಮ ಆನೆಗಳು ದುರಂತ ಸಾವನ್ನಪ್ಪಿವೆ. ಅಲ್ಲದೇ ದಸರಾದಲ್ಲಿ ಭಾಗಿಯಾದ ಅನೇಕ ಆನೆಗಳು ಅಕಾಲಿಕವಾಗಿ ಸಾವನ್ನಪ್ಪಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





